ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರತಿವರ್ಷ ಎನ್ಡಬ್ಲುಕೆಆರ್ಟಿಸಿ ವ್ಯಾಪ್ತಿಯ ಒಂಬತ್ತು ಜಿಲ್ಲೆಗಳ ಸುಮಾರು 5.36 ಲಕ್ಷ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ರಿಯಾಯತಿ ದರದಲ್ಲಿ ಬಸ್ ಪಾಸ್ ವಿತರಿಸುತ್ತದೆ. ಇದಕ್ಕೆ ತಗಲುವ ವೆಚ್ಚದಲ್ಲಿ ಶೇ 50ರಷ್ಟು ರಾಜ್ಯ ಸರ್ಕಾರ ಭರಿಸಬೇಕು. ಆದರೆ, ಸರ್ಕಾರ ಶೇ 8ರಷ್ಟು ಹಣವನ್ನು ಮಾತ್ರ ಪಾವತಿಸುತ್ತಿದೆ. ಇದು ನಿಗಮದ ಆದಾಯಕ್ಕೆ ದೊಡ್ಡ ಹೊಡೆತ ನೀಡಿದಂತಾಗಿದೆ. ಕಳೆದ ಅನೇಕ ವರ್ಷಗಳಿಂದ ಅಂದಾಜು₹ 400 ಕೋಟಿ ಹಣ ಸರ್ಕಾರದಿಂದ ಬಾಕಿ ಇದೆ. ಇದರಿಂದಾಗಿ ನಿಗಮದ ಸಿಬ್ಬಂದಿಗೆ ಕೊಡಬೇಕಾಗಿರುವ ವಿವಿಧ ಭತ್ಯೆಗಳು ಬಾಕಿ ಉಳಿದಿವೆ. ₹ 70 ಕೋಟಿಯನ್ನು ಸಿಬ್ಬಂದಿಗೆ ನೀಡುವುದು ವಿಳಂಬವಾಗಿದೆ. ರಾಜ್ಯ ಸರ್ಕಾರ ಆದಷ್ಟು ಶೀಘ್ರ ಈ ಹಣ ಜಮಾ ಮಾಡಬೇಕು’ ಎಂದು ಒತ್ತಾಯಿಸಿದರು.