ಮಡಿಕೇರಿ: ಇಲ್ಲಿಗೆ ಸಮೀಪದ ಸಿದ್ದಾಪುರದಲ್ಲಿ ಇದೇ 20, 21ರಂದು ನಡೆಯಲಿರುವ ಆದಿವಾಸಿ– ಬುಡಕಟ್ಟು ಜನರ ರಾಜ್ಯ ಮಟ್ಟದ ಎರಡನೇ ಸಮಾವೇಶದಲ್ಲಿ ಆದಿವಾಸಿ ಹಕ್ಕುಗಳ ಹೋರಾಟಗಾರ್ತಿ ಹಾಗೂ ಕಮ್ಯುನಿಸ್ಟ್ ಪಕ್ಷದ ನಾಯಕಿ ಬೃಂದಾ ಕಾರಟ್ ಭಾಗವಹಿಸಲಿದ್ದಾರೆ.
ಪಶ್ಚಿಮಘಟ್ಟದ ಪ್ರದೇಶದಲ್ಲಿ ವಾಸವಿರುವ ಆದಿವಾಸಿಗಳ ಸಮಸ್ಯೆಗಳು ಹಾಗೂ ಕೇಂದ್ರ ಸರ್ಕಾರವು ಅಂಗೀಕರಿಸಿರುವ ಕಸ್ತೂರಿ ರಂಗನ್ ವರದಿಯಿಂದ ಕೊಡಗು ಜಿಲ್ಲೆಯ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಂಚಾಲನಾ ಸಮಿತಿಯ ಸದಸ್ಯ ಎಸ್.ವೈ. ಗುರುಶಾಂತ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಡಿ.20ರಂದು ಬೆಳಿಗ್ಗೆ 11.30ಕ್ಕೆ ನೆಲ್ಯಹುದಿಕೇರಿಯಿಂದ ಸಿದ್ದಾಪುರದವರೆಗೆ ಆದಿವಾಸಿಗಳ ಬೃಹತ್ ಮೆರವಣಿಗೆ ಹೊರಡಲಿದೆ. ಸಿದ್ದಾಪುರದ ಸ್ವರ್ಣ ಮಹಲ್ನಲ್ಲಿ ಸಮಾವೇಶ ನಡೆಯಲಿದೆ. ಬೃಂದಾ ಕಾರಟ್ ಜೊತೆ ಆದಿವಾಸಿ ಅಧಿಕಾರ್ ರಾಷ್ಟ್ರೀಯ ಮಂಚ್ನ ಅಖಿಲ ಭಾರತ ಸಹ–ಸಂಚಾಲಕ ಡಾ.ಬಾಬುರಾವ್ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಅರಣ್ಯ ಹಕ್ಕು ಕಾಯ್ದೆ ಜಾರಿ, ಬುಡಕಟ್ಟು ಜನರ ವಿಶೇಷ ಯೋಜನೆ, ಶಿಕ್ಷಣ, ಉದ್ಯೋಗ ಸೇರಿದಂತೆ ಇತರ ಸಮಸ್ಯೆಗಳ ಬಗ್ಗೆ ಚಿಂತನ–ಮಂಥನ ನಡೆಯಲಿದೆ. ರಾಜ್ಯದ 12 ಜಿಲ್ಲೆಗಳ ಆದಿವಾಸಿಗಳು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷ ಕೆ.ಟಿ. ಬೇಬಿ ಮ್ಯಾಥ್ಯೂ, ಕಾರ್ಯಾಧ್ಯಕ್ಷ ಕೆ.ಆರ್. ವಿದ್ಯಾಧರ್, ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಟ್ಟಪ್ಪ ಕಾರ್ಯದರ್ಶಿ ಪಿ.ಆರ್. ಭರತ್ ಪಾಲ್ಗೊಂಡಿದ್ದರು.