ಬೆಂಗಳೂರು: ರಾಜ್ಯದಲ್ಲಿ ನೈರುತ್ಯ ಮುಂಗಾರು ಅವಧಿಯಲ್ಲಿ ಈ ವರ್ಷ ಶೇ 25ರಷ್ಟು ಮಳೆ ಕೊರತೆಯಾಗಿದೆ.
ಜೂನ್ 1ರಿಂದ ಸೆಪ್ಟೆಂಬರ್ 30ರವರೆಗಿನ ನಾಲ್ಕು ತಿಂಗಳಲ್ಲಿ ಒಟ್ಟು 845 ಮಿ.ಮೀ ಮಳೆ ಸುರಿಯಬೇಕಿತ್ತು. ಆದರೆ, 635 ಮಿ.ಮೀ ಅಷ್ಟೇ ಮಳೆಯಾಗಿದೆ.
ಕರಾವಳಿ ಭಾಗದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳು, ಶೇ 20ರಷ್ಟು ಮಳೆ ಕೊರತೆ ಕಂಡಿವೆ. ಕರಾವಳಿಯಲ್ಲಿ 3,091 ಮಿ.ಮೀ ವಾಡಿಕೆ ಮಳೆ ಪ್ರಮಾಣವಾಗಿದ್ದು, 2,481 ಮಿ.ಮೀ ಮಳೆಯಾಗಿದೆ.
ಮಲೆನಾಡು ಜಿಲ್ಲೆಗಳಲ್ಲಿ ಶೇ 39ರಷ್ಟು ಮಳೆ ಕೊರತೆಯಾಗಿದೆ. ಚಿಕ್ಕಮಗಳೂರು, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಯಲ್ಲಿ 1,550 ಮಿ.ಮೀ ವಾಡಿಕೆ ಮಳೆ ಇದ್ದು, 945 ಮಿ.ಮೀ ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಶೇ 25, ಉತ್ತರ ಒಳನಾಡಿನಲ್ಲಿ ಶೇ 19ರಷ್ಟು ಕೊರತೆಯಾಗಿದೆ.
ಒಟ್ಟು 23 ಜಿಲ್ಲೆಗಳಲ್ಲಿ ಮಳೆಯ ತೀವ್ರ ಅಭಾವ ಸೃಷ್ಟಿಯಾಗಿದೆ. ಬಳ್ಳಾರಿಯಲ್ಲಿ ಶೇ 49, ಕೊಡಗು ಶೇ 42, ಚಿಕ್ಕಮಗಳೂರು, ವಿಜಯನಗರದಲ್ಲಿ ಶೇ 40, ಶಿವಮೊಗ್ಗ, ಚಾಮರಾಜನಗರದಲ್ಲಿ ಶೇ 37, ರಾಮನಗರ, ಮೈಸೂರು ಹಾಗೂ ಹಾಸನದಲ್ಲಿ ಶೇ 36ರಷ್ಟು ಮಳೆ ಕೊರತೆಯಾಗಿದೆ.
ಕರಾವಳಿಯಲ್ಲಿ ಯೆಲ್ಲೊ ಅಲರ್ಟ್
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾನುವಾರ ಧಾರಾಕಾರ ಮಳೆಯಾಗುವ ಸಾಧ್ಯತೆಯಿದ್ದು ಭಾರತೀಯ ಹವಾಮಾನ ಇಲಾಖೆ ‘ಯೆಲ್ಲೊ ಅಲರ್ಟ್’ ಘೋಷಿಸಿದೆ.