ಬೆಂಗಳೂರು: ಪ್ರಜಾಕೀಯ ಪಕ್ಷದ ಮುಖಂಡ ಹಾಗೂ ರಾಜ್ಯ ಗಂಗಾಮತಸ್ಥ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಮುರಳೀಧರ್ ಸೇರಿದಂತೆ ಹಲವರು ಎಎಪಿ ಬೆಂಗಳೂರು ನಗರ ಘಟಕದ ಅಧ್ಯಕ್ಷ ಮೋಹನ್ ದಾಸರಿ ಸಮ್ಮುಖದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಶುಕ್ರವಾರ ಸೇರ್ಪಡೆಯಾದರು.
‘ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ದೆಹಲಿಯಲ್ಲಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಹೊಸ ಮಾದರಿ ಸೃಷ್ಟಿಸಿದೆ. ರಾಜ್ಯದ ಸರ್ಕಾರಿ ಶಾಲೆಗಳೂ ಅದೇ ಮಾದರಿಯಲ್ಲಿ ಅಭಿವೃದ್ಧಿಯಾಗಬೇಕು. ಇದಕ್ಕಾಗಿ ರಾಜ್ಯದಲ್ಲೂ ಎಎಪಿ ಸರ್ಕಾರ ರಚನೆಯಾಗಬೇಕು. ಈ ದಿಸೆಯಲ್ಲಿ ಪಕ್ಷ ಸಂಘಟಿಸಲು ಶ್ರಮಿಸುತ್ತೇನೆ. ಎಎಪಿಯು ತಳ ಸಮುದಾಯಗಳನ್ನೂ ಸಮಾನವಾಗಿ ಗೌರವಿಸುವ ನಿಲುವು ಹೊಂದಿದೆ’ ಎಂದು ಮುರಳೀಧರ್ ತಿಳಿಸಿದರು.
ಮೋಹನ್ ದಾಸರಿ, ‘ವಿವಿಧ ಪಕ್ಷ, ಸಮುದಾಯದ ಪ್ರಾಮಾಣಿಕ ವ್ಯಕ್ತಿಗಳು ಪಕ್ಷಕ್ಕೆ ಸೇರುತ್ತಿರುವುದರಿಂದ ಕಾರ್ಯಕರ್ತರ ಉತ್ಸಾಹ ಹೆಚ್ಚಿದೆ. ಮುರಳೀಧರ್ ಅವರು ಸ್ವರಾಜ್ಯ ಮಾತೃಭೂಮಿ ಎಂಬ ಸಂಘ ಸ್ಥಾಪಿಸಿದ್ದಾರೆ. ಸರ್ಕಾರಿ ಶಾಲೆಗಳನ್ನು ದತ್ತುಪಡೆದು ಅವುಗಳನ್ನು ಮಾದರಿಯಾಗಿ ರೂಪಿಸಿದ್ದಾರೆ’ ಎಂದರು.