ಬೆಂಗಳೂರು: ‘ಎಲ್ಲ ಸಮಸ್ಯೆಗಳನ್ನು ಮುಖ್ಯಮಂತ್ರಿ ಬಗೆಹರಿಸಿ, ಅಧಿವೇಶನದಲ್ಲಿ ಭಾಗವಹಿಸುವಂತೆ ಆದೇಶಿಸಿದ್ದಾರೆ. ಹೀಗಾಗಿ, ಭಾಗವಹಿಸುತ್ತೇನೆ’ ಎಂದು ಆಳಂದ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ ಹೇಳಿದರು.
ಶಕ್ತಿಭವನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬುಧವಾರ ಭೇಟಿ ಮಾಡಿ ಕೆಲಹೊತ್ತು ಚರ್ಚೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು.
‘ಮುಖ್ಯಮಂತ್ರಿ ಕರೆ ಮಾಡಿ ಕರೆದಿದ್ದರು. ಮುಕ್ಕಾಲು ಗಂಟೆ ಮಾತನಾಡಿದರು. ನನಗೆ ಸಮಾಧಾನ ಆಗಿದೆ. ಅವರ ಮೇಲೆ ನನಗೆ ನಂಬಿಕೆ ಇದೆ’ ಎಂದರು.
‘ಕೃಷ್ಣ ಬೈರೇಗೌಡ ಮಾತನಾಡಿದ ಅರ್ಥವನ್ನು ಬಿಚ್ಚಿ ಹೇಳಬೇಕೇ? ಕೆಆರ್ಐಡಿಎಲ್ಗೆ ಯಾಕೆ ಕಾಮಗಾರಿ ಕೊಡಬೇಕೆಂದು ಎಲ್ಲ ಶಾಸಕರಿಗೆ ಅವರು ಸವಾಲು ಹಾಕಿದ್ದಾರೆ. ಪಂಚರಾಜ್ಯಗಳ ಚುನಾವಣೆ ಇದ್ದುದರಿಂದ ನಾನು ಸುಮ್ಮನಿದ್ದೆ. ಈಗ ಈ ವಿಚಾರ ಎತ್ತಿದ್ದೇನೆ. ಪ್ರಿಯಾಂಕ್ ಖರ್ಗೆ ಜೊತೆ ಯಾವುದೇ ಮನಃಸ್ತಾಪ ಇಲ್ಲ. ಕೃಷ್ಣ ಬೈರೇಗೌಡ ಜೊತೆಗೂ ಭಿನ್ನಾಭಿಪ್ರಾಯ ಇಲ್ಲ’ ಎಂದರು.
ಜನ ಒಪ್ಪುವುದಿಲ್ಲ: ‘ಬಿ.ಆರ್. ಪಾಟೀಲರ ಮೇಲೆ ಅಪಾರ ಗೌರವವಿದೆ. ಅವರು ತತ್ವ, ಸಿದ್ಧಾಂತದ ಮೇಲೆ ರಾಜಕಾರಣ ಮಾಡಿದವರು. ಅವರ ನೋವನ್ನು ಅವರು ಹೇಳಿಕೊಂಡಿದ್ದಾರೆ. ಅವರ ಮೇಲೆ ಯಾರಾದರೂ ಆರೋಪ ಮಾಡಿದರೆ ಜನ ಒಪ್ಪುವುದಿಲ್ಲ’ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.