ಬೆಂಗಳೂರು: ‘ಹಳೆಯ ವಿದ್ಯಾರ್ಥಿಗಳು ವಿಸ್ತೃತ ಕುಟುಂಬವಾಗಿದ್ದು, ಮಾರ್ಗದರ್ಶಕರ ಪಾತ್ರ ನಿರ್ವಹಿಸುತ್ತಾರೆ’ ಎಂದು ರಾಜ್ಯ ಪರಿವರ್ತನಾ ಸಂಸ್ಥೆಯ ಅಧ್ಯಕ್ಷ ಎಂ.ವಿ. ರಾಜೀವ್ ಗೌಡ ಹೇಳಿದರು.
ರಾಜ್ಯ ಒಕ್ಕಲಿಗ ಸಂಘದ ಶಿಕ್ಷಣ ಸಂಸ್ಥೆಯಾದ ಬೆಂಗಳೂರು ತಾಂತ್ರಿಕ ಮಹಾವಿದ್ಯಾಲಯ (ಬಿಐಟಿ) ನಗರದ ಕುವೆಂಪು ಕಲಾಕ್ಷೇತ್ರದಲ್ಲಿ ಆಯೋಜಿಸಿದ ಎರಡು ದಿನಗಳ ಕೈಗಾರಿಕಾ ಅಕಾಡೆಮಿ ಮತ್ತು ಹಳೆ ವಿದ್ಯಾರ್ಥಿಗಳ ಶೃಂಗಸಭೆಯಲ್ಲಿ ಅವರು ಮಾತನಾಡಿದರು.
ಹಳೆಯ ವಿದ್ಯಾರ್ಥಿಗಳ ಸಂಘದ ಅಗತ್ಯವನ್ನು ವಿವರಿಸಿದ ಅವರು, ‘ಬೆಂಗಳೂರಿಗೆ ಬಂದು ಅಧ್ಯಯನ ಮಾಡಲು ಸಿಗುವ ಅವಕಾಶವನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಉದ್ಯಮಿ ಮದನ್ ಪದಕಿ ಮಾತನಾಡಿ, ‘ವ್ಯಕ್ತಿಯ ಆಂತರಿಕ ಮತ್ತು ಬಾಹ್ಯ ಗುಣಲಕ್ಷಣಗಳ ಅಭಿವೃದ್ಧಿಗೆ ವಿಶ್ವಾಸ, ಸಂವಹನ, ಸಹಾನುಭೂತಿ, ಸಾಂವಿಧಾನಿಕ ಮೌಲ್ಯಗಳು, ಸೃಷ್ಟಿಕರ್ತ, ಹವಾಮಾನ, ಚಾಟ್ ಜಿಪಿಟಿ ಅರಿವು ಮತ್ತು ಸಮುದಾಯ ನಿರ್ಮಾಣದಂತಹ ಗುಣಗಳನ್ನು ಅಳವಡಿಸಿಕೊಳ್ಳಬೇಕು’ ಎಂದರು.
ಶೃಂಗ ಸಭೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳ, ಉತ್ಪನ್ನಗಳ ಪ್ರದರ್ಶನದ 100ಕ್ಕೂ ಹೆಚ್ಚು ಮಳಿಗೆಗಳು ಇದ್ದವು. ವಿದ್ಯಾರ್ಥಿಗಳು, ಪೋಷಕರು ಮತ್ತು ವಾಣಿಜ್ಯೋದ್ಯಮಿಗಳು ಸೇರಿದಂತೆ ಐದು ಸಾವಿರಕ್ಕೂ ಹೆಚ್ಚು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬಿಐಟಿ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಕೆ. ಧರ್ಮೇಶ್, ರಾಜ್ಯ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಬಿ. ಕೆಂಚಪ್ಪಗೌಡ, ಒಕ್ಕಲಿಗರ ಸಂಘದ ಉಪಾಧ್ಯಕ್ಷ ಎಲ್. ಶ್ರೀನಿವಾಸ್, ಹಾಪ್ಕಾಮ್ಸ್ ಅಧ್ಯಕ್ಷ ಸಿ. ದೇವರಾಜು ಮತ್ತಿತರರು ಇದ್ದರು.