ಕಾರವಾರ: ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ವಿರುದ್ಧ ಸಂಸದ ಅನಂತಕುಮಾರ ಹೆಗಡೆ ಮತ್ತೊಮ್ಮೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ಸೋಮವಾರ ರಾತ್ರಿ ವಿಡಿಯೊ ಅಪ್ಲೋಡ್ ಮಾಡಿರುವ ಅವರು, ಸೆಂಥಿಲ್ ಅವರನ್ನು ‘ರಾಜದ್ರೋಹಿ’ ಎಂದು ಕರೆದಿದ್ದಾರೆ.
‘ಸೆಂಥಿಲ್ ರಾಜೀನಾಮೆಯನ್ನು ಕೇವಲ ವ್ಯಕ್ತಿಯ ರಾಜೀನಾಮೆ ಎಂದು ಭಾವಿಸಬಾರದು. ಭಾರತೀಯ ಆಡಳಿತ ಸೇವೆಯ ಒಬ್ಬ ಅಧಿಕಾರಿ, ಸಂಸತ್ತು ಬಹುಮತದ ಆಧಾರದಲ್ಲಿ ತೆಗೆದುಕೊಂಡ ತೀರ್ಮಾನವನ್ನು ಪ್ರಶ್ನಿಸುವ ದುಃಸ್ಸಾಹಸಕ್ಕೆ ಕೈಹಾಕಿದ್ದಾರೆ. ಬಹುಶಃ ಸರ್ಕಾರಕ್ಕೆ ಇದಕ್ಕಿಂತ ದೊಡ್ಡ ದ್ರೋಹ ಇನ್ನೊಂದು ಇಲ್ಲ ಎಂದು ಭಾವಿಸಿದ್ದೇನೆ. ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ತುರ್ತು ಕ್ರಮವನ್ನು ತೆಗೆದುಕೊಳ್ಳಬೇಕು. ರಾಜ್ಯಪಾಲರಿಗೆ ಸಂಪೂರ್ಣವಾದ ಅಧಿಕಾರವಿದೆ. ಜನ ಕೂಡ ಇದನ್ನೇ ಬಯಸುತ್ತಿದ್ದಾರೆ’ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
Serving the government & yet questioning people representative's decision taken as per constitutional norms, besides labelling it as fascist amounts to nothing less than #Rajadroha! pic.twitter.com/D8NGkJpm3F
— Anantkumar Hegde (@AnantkumarH) September 9, 2019
‘ಅತಿಯಾದ ಸ್ವಚ್ಛಂದವಿದು, ಇದನ್ನು ನಾನು ಸ್ವಾತಂತ್ರ್ಯ ಎಂದು ಭಾವಿಸುವುದಿಲ್ಲ.ಸ್ವೇಚ್ಛಾಚಾರ ಈ ರೀತಿಯ ಅನಾಹುತಗಳಿಗೆ ಎಡೆ ಮಾಡಿಕೊಟ್ಟಿದೆ. ಈ ರೀತಿಯ ದುಷ್ಕೃತ್ಯ ನಡೆದಿರುವುದರ ಕಾರಣವನ್ನು ಬಯಲಿಗೆಳೆಯಬೇಕು. ಇದರ ಹಿಂದಿರುವ ಕಾಣದ ಕೈವಾಡವೇನಿದೆ ಎಂಬುದನ್ನು ಜನರ ಮುಂದಿಡಬೇಕು. ಖಂಡಿತವಾಗಿ ಇದು ಅಕ್ಷಮ್ಯ ಅಪರಾಧ’ ಎಂದು ಅವರು ಹೇಳಿದ್ದಾರೆ.
‘ಸರ್ಕಾರ ತೆಗೆದುಕೊಂಡಿರುವ ತೀರ್ಮಾನವನ್ನು ಆಡಳಿತ ಸೇವೆಯಲ್ಲಿರುವ ಅಧಿಕಾರಿ ಪ್ರಶ್ನಿಸಲು ಸಾಧ್ಯವೇ ಇಲ್ಲ, ಮಾಡಲೂ ಬಾರದು. ಬಹುಮತದ ಆಧಾರದಲ್ಲಿ ತೆಗೆದುಕೊಂಡ ನಿರ್ಧಾರವನ್ನು ಪ್ರಶ್ನಿಸುವುದುಅವನ ದುರಂಹಕಾರ, ಅಸಭ್ಯತೆ’ ಎಂದು ಏಕವಚನದಲ್ಲಿ ಟೀಕಿಸಿದ್ದಾರೆ.
ಇದನ್ನೂ ಓದಿ:ಮರಳು ಮಾಫಿಯಾಕ್ಕೆ ಮೂಗುದಾರ ಹಾಕಿದ್ದ ಸೆಂಥಿಲ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.