ಕೆ.ಆರ್.ನಗರ, (ಮೈಸೂರು): ‘40 ವರ್ಷಗಳನನ್ನ ರಾಜಕೀಯ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ರಾಜಕಾರಣ ಹೀಗೆಯೇ ಇರುತ್ತದೆ ಎನ್ನಲಾಗದು. ಕಾಲಚಕ್ರದಲ್ಲಿ ಏನು ಬೇಕಾದರೂ ಆಗಬಹುದು’ ಎಂದು ವಿಧಾನಪರಿಷತ್ ಸದಸ್ಯ ಬಿಜೆಪಿಯ ಎ.ಎಚ್.ವಿಶ್ವನಾಥ್ ಹೇಳಿದರು.
‘ಮತ್ತೆ ಕಾಂಗ್ರೆಸ್ ಸೇರುವಿರಾ?’ ಎಂಬ ಸುದ್ದಿಗಾರರ ಪ್ರಶ್ನೆಗೆ ಅವರು ಹೀಗೇ ಪ್ರತಿಕ್ರಿಯಿಸಿದರು. ‘ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಈ ಯಾವ ಪಕ್ಷಗಳೂ ಮುಳುಗುವ ಹಡಗುಗಳಲ್ಲ. ಅವು ಜನರೊಂದಿಗೆ ತೇಲುವಂಥವು; ಇರುವಂಥವು’ ಎಂದು ಅವರು ಹೇಳಿದರು.
‘ಭಾರತ್ ಜೋಡೊ ಯಾತ್ರೆಯಿಂದ ಕಾಂಗ್ರೆಸ್ಗೆ ಶಕ್ತಿ ಬರುತ್ತಿದೆ. ರಾಹುಲ್ ಗಾಂಧಿ ಬಗ್ಗೆ ಜನರಲ್ಲಿ ಕೆಟ್ಟ ಅಭಿಪ್ರಾಯ ಗಳನ್ನು ವಿರೋಧಿಗಳು ಮೂಡಿಸಿ ದ್ದರು.ಪಾದಯಾತ್ರೆಯ ಮೂಲಕ ದೇಶದಲ್ಲಿ ಪರ್ಯಾಯ ನಾಯಕ ಇದ್ದಾನೆ ಎಂದು ಅವರು ತೋರಿಸಿಕೊಟ್ಟಿದ್ದಾರೆ’ ಎಂದರು.
‘10 ಲಕ್ಷ ಉದ್ಯೋಗದ ಭರವಸೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಮೀಸಲಾತಿ ಆಧಾರದಲ್ಲಿ ಭರ್ತಿಗೆ ಕ್ರಮ ಕೈಗೊಳ್ಳಬೇಕು. ದುರ್ಬಲ ವರ್ಗದವರು ಉದ್ಯೋಗದಿಂದ ವಂಚಿತವಾಗದಂತೆ ನೋಡಿಕೊಳ್ಳಬೇಕು’ ಎಂದು ವಿಶ್ವನಾಥ್ ಅವರು ಒತ್ತಾಯಿಸಿದರು.