ಬೆಂಗಳೂರು: ‘ಹೊಸ ಮುಖ್ಯಮಂತ್ರಿ ಆಯ್ಕೆ ಸಂಬಂಧ ದೆಹಲಿಯಲ್ಲಿ ಕೇಂದ್ರದ ಪ್ರಮುಖರ ಸಭೆ, ಸಂಸದೀಯ ಮಂಡಳಿ ಸಭೆ ಸೇರಿದಂತೆ ಸರಣಿ ಸಭೆಗಳು ನಡೆಯುತ್ತಿವೆ. ಮುಂದಿನ ಮೂರ್ನಾಲ್ಕು ದಿನದಲ್ಲಿ ಆಯ್ಕೆ ಪ್ರಕ್ರಿಯೆ ಮುಗಿಯಲಿದೆ’ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಸಭೆಯಲ್ಲಿ ಯಾವ ಆಯಾಮಗಳಲ್ಲಿ ಚರ್ಚೆ ಆಗಿದೆ ಎಂಬ ಮಾಹಿತಿ ಇಲ್ಲ’ ಎಂದರು.
‘ರಾಜ್ಯಕ್ಕೆ ಧರ್ಮೇಂದ್ರ ಪ್ರಧಾನ್ ಬರುತ್ತಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಕೂಡ ಬರುವ ಸಾಧ್ಯತೆ ಇದೆ. ಶಾಸಕಾಂಗ ಸಭೆ, ಪ್ರಮುಖರ ಸಭೆ, ಸಂಸದೀಯ ಮಂಡಳಿಯ ಸಭೆಯ ಅಭಿಪ್ರಾಯದಂತೆ ಮುಖ್ಯಮಂತ್ರಿ ಆಯ್ಕೆ ಅಂತಿಮ ನಡೆಯಲಿದೆ’ ಎಂದೂ ಹೇಳಿದರು.
‘ನನ್ನ ಜಿಲ್ಲೆಯ ಶಾಸಕರು ನಾನು ಮುಖ್ಯಮಂತ್ರಿ ಆಗಬೇಕು ಎಂದು ಬಯಸುವುದರಲ್ಲಿ ವಿಶೇಷ ಇಲ್ಲ. ಪಕ್ಷ ಏನು ನಿರ್ಧಾರ ಮಾಡುತ್ತದೆ ಎನ್ನುವುದು ಮುಖ್ಯ’ ಎಂದರು.