ಹೊಸಪೇಟೆ: ‘ಹತ್ತು ಹೆಣ್ಣು ಮಕ್ಕಳ ಜತೆ ಒಬ್ಬ ವ್ಯಕ್ತಿ ಮಲಗಲು ಸಾಧ್ಯವೇ?’ ಹೀಗೆ ಪ್ರಶ್ನಿಸಿದವರು ಕಾಂಗ್ರೆಸ್ ಹಿರಿಯ ಮುಖಂಡ ಸೂರ್ಯನಾರಾಯಣ ರೆಡ್ಡಿ ಅವರು.
ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಈ ರೀತಿ ಪ್ರಶ್ನಿಸಿದಾಗ ಅಲ್ಲಿದ್ದ ಮುಖಂಡರು, ಕಾರ್ಯಕರ್ತರು ಒಂದು ಕ್ಷಣ ಗಲಿಬಿಲಿಯಾದರು. ವೇದಿಕೆಯ ಮೇಲೆ, ಮುಂಭಾಗದಲ್ಲಿದ್ದ ಪಕ್ಷದ ಮಹಿಳಾ ನಾಯಕಿಯರು ಒಂದು ಕ್ಷಣ ಏನೂ ಮಾತನಾಡದೆ ತಲೆಬಾಗಿಸಿ ಮೌನಕ್ಕೆ ಜಾರಿದರು.
‘ವಿಜಯನಗರ ಕ್ಷೇತ್ರದಲ್ಲಿ ಕಾಂಗ್ರೆಸ್ನಲ್ಲಿ ಪ್ರಬಲ ನಾಯಕರಿಲ್ಲ. ನೀವು ಈ ಕ್ಷೇತ್ರಕ್ಕೆ ಬರಬೇಕು’ ಎಂದು ಕಾರ್ಯಕರ್ತರು ಹಕ್ಕೊತ್ತಾಯ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಸೂರ್ಯನಾರಾಯಣ ರೆಡ್ಡಿ, ‘ಎಲ್ಲಾ ಕಡೆ ನಾನೇ ಬರಬೇಕಾ? ಅನೇಕ ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ಹಣ ಕೊಟ್ಟು ಕೊಟ್ಟು ನನ್ನ ಪ್ಯಾಂಟ್ ಲೂಸ್ ಆಗಿದೆ’ ಎಂದು ತೋರಿಸಿದಾಗ ಕಾರ್ಯಕರ್ತರು ಮುಸಿಮುಸಿ ನಕ್ಕರು.
‘ನಾನು ಎಂಎಲ್ಎ ಆಗುವುದು ಬಿಡುವುದು ಎರಡನೇ ಮಾತು. ಆದರೆ, ಗೆಲ್ಲಿಸುವ ಶಕ್ತಿ ನನ್ನಲ್ಲಿದೆ. ನಾನು ಎಂಎಲ್ಎಗಳನ್ನು ತಯಾರಿಸುವ ಫ್ಯಾಕ್ಟರಿ ಇದ್ದಂತೆ. ಅಭ್ಯರ್ಥಿ ಯಾರಾಗುತ್ತಾರೆ ಎನ್ನುವುದು ಬೇರೆ ವಿಚಾರ. ಆದರೆ, ಪಕ್ಷ ನನಗೆ ಚುನಾವಣೆಗೆ ನಿಲ್ಲುವಂತೆ ಹೇಳಿದರೆ ನಿಲ್ಲುವೆ. 2023ರ ವಿಧಾನಸಭೆ ಚುನಾವಣೆಯಲ್ಲಿ ವಿಜಯನಗರದಿಂದ ಕಾಂಗ್ರೆಸ್ ಗೆಲ್ಲುವುದು ಖಚಿತ’ ಎಂದು ಭರವಸೆ ವ್ಯಕ್ತಪಡಿಸಿದರು.