ಮೈಸೂರು: ‘ಬಿಜೆಪಿಗೂ ಶ್ರೀರಾಮಸೇನೆಗೂ ಯಾವುದೇ ಸಂಬಂಧವಿಲ್ಲ' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ಕುಮಾರ್ ಕಟೀಲ್ ತಿಳಿಸಿದರು.
‘ಮುಸ್ಲಿಂ ವ್ಯಾಪಾರಿಯ ಕಲ್ಲಂಗಡಿ ಹಣ್ಣು ಒಡೆದಿರುವುದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ. ಪಕ್ಷ ಯಾವುದೇ ಸಮುದಾಯವನ್ನು ಗುರಿಯಾಗಿಸಿಕೊಂಡಿಲ್ಲ. ಸಂಘ ಪರಿವಾರದೊಂದಿಗೆ ಸಂಬಂಧವಿದೆ. ಅಶಾಂತಿ ಎಬ್ಬಿಸುತ್ತಿರುವ ಸಂಘಟನೆಗಳೊಂದಿಗೆ ಸಂಬಂಧವಿಲ್ಲ’ ಎಂದು ಅವರು ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಪಾದಿಸಿದರು.
‘ವಿಧಾನಸಭಾ ಚುನಾವಣೆಯಲ್ಲಿ ಪಕ್ಷ 150 ಸ್ಥಾನ ಗಳಿಸಲಿದೆ. ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಮತಬ್ಯಾಂಕ್ಗಾಗಿ ಕಾಂಗ್ರೆಸ್ ಎಲ್ಲವನ್ನೂ ರಾಜಕೀಯಕ್ಕೆ ಬಳಸಿಕೊಳ್ಳುತ್ತದೆ. ಆದರೆ ಬಿಜೆಪಿಗೆ ಹಿಂದೂ ಮತಬ್ಯಾಂಕಿನ ಅಗತ್ಯವಿಲ್ಲ. ಕಾಂಗ್ರೆಸ್ನ ಇಂದಿನ ಸ್ಥಿತಿ ನೋಡಿದರೆ ಕಣ್ಣೀರು ಬರುತ್ತಿದೆ. ವಿಧಾನಸಭೆಯಲ್ಲಿ ಚರ್ಚೆ ಮಾಡಲೂ ಹೆದರುವಷ್ಟರ ಮಟ್ಟಿಗೆ ಅದು ದುರ್ಬಲಗೊಂಡಿದೆ’ ಎಂದು ಲೇವಡಿ ಮಾಡಿದರು.
‘ಪಕ್ಷದ ವಿಭಾಗಮಟ್ಟದ ಸಭೆಯ ಜೊತೆಗೇ, ಏ.16 ಮತ್ತು 17ರಂದು ರಾಜ್ಯ ಕಾರ್ಯಕಾರಿಣಿಯೂ ನಡೆಯಲಿದೆ. ಮತದಾರರ ಪಟ್ಟಿಯ ಪ್ರತಿ ಪುಟಕ್ಕೂ 6 ಜನರ ಸಮಿತಿ ರಚಿಸಿ, ಮತದಾರರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಲು ಸೂಚಿಸಲಾಗಿದೆ’ ಎಂದರು.
‘ಹಿಜಾಬ್ ಪ್ರಕರಣದಲ್ಲಿ ನ್ಯಾಯಾಲಯದ ಆದೇಶದ ವಿರುದ್ಧ ದನಿ ಎತ್ತಿದವರನ್ನು ಬೆಂಬಲಿಸಿ, ಕೋರ್ಟ್ ಆದೇಶದ ವಿರುದ್ಧ ನಿಂತ ಮೊದಲ ವಿರೋಧ ಪಕ್ಷದ ನಾಯಕ ಎಂಬ ಹೆಸರಿಗೆ ಸಿದ್ದರಾಮಯ್ಯ ಪಾತ್ರರಾಗಿದ್ದಾರೆ’ ಎಂದು ಟೀಕಿಸಿದರು.