ಲಕ್ಷ್ಮೇಶ್ವರ: ತಾಲ್ಲೂಕಿನ ಸೂರಣಗಿ ಗ್ರಾಮದಲ್ಲಿ ಕಟೌಟ್ ಕಟ್ಟುವಾಗ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟವರ ಕುಟುಂಬಗಳಿಗೆ ನಟ ಯಶ್ ಅವರು ಯಶೋಫೌಂಡೇಷನ್ ವತಿಯಿಂದ ನೀಡಿದ ತಲಾ ₹5 ಲಕ್ಷ ಮೊತ್ತದ ಚೆಕ್ಗಳನ್ನು ಬುಧವಾರ ವಿತರಿಸಲಾಯಿತು.
ವಿದ್ಯುತ್ ಸ್ಪರ್ಶಿಸಿ ಗಾಯಗೊಂಡವರ ಮನೆಗಳಿಗೂ ತೆರಳಿದ ಯಶ್ ಆಪ್ತರು, ಪರಿಹಾರ ನೀಡುವ ಭರವಸೆ ನೀಡಿದರು. ಚೆಕ್ ಸ್ವೀಕರಿಸಿದ ಮೃತರ ಪಾಲಕರ ಕಣ್ಣೀರಿಟ್ಟರು. ಮೃತ ಮುರಳಿ ಅವರ ತಾಯಿ, ‘ನೋಡು ಮಗನಾ ನಿನ್ನ ಯಶ್ ರೊಕ್ಕಾ ಕಳಸ್ಯಾರ’ ಎಂದು ಗೋಳಾಡಿದರು.
ಯಶ್ ಆಪ್ತ ಚೇತನ ಮಾತನಾಡಿ, ‘ಇಂತಹ ದುರಂತ ಆಗಬಾರದಿತ್ತು. ಘಟನೆ ನಡೆದ ದಿನ ಯಶ್ ದುಃಖಿತರಾಗಿದ್ದರು. ಸದ್ಯ ಅವರು ಪರಿಹಾರ ಕೊಟ್ಟಿದ್ದಾರೆ. ಮುಂದೆಯೂ ಅವರು ಪಾಲಕರ ಜೊತೆ ಇರುತ್ತಾರೆ’ ಎಂದು ಹೇಳಿದರು.
‘ಯಶ್ ಅವರು ಅಭಿಮಾನಿಗಳ ಮೇಲೆ ಸಾಕಷ್ಟು ಗೌರವ ಇಟ್ಟುಕೊಂಡಿದ್ದಾರೆ. ಮೃತ ಯುವಕರ ಮನೆಗಳಿಗೆ ಸ್ವತಃ ಅವರೇ ಭೇಟಿ ನೀಡಿ, ಮಾನವೀಯತೆ ಮೆರೆದರು’ ಎಂದು ಗ್ರಾಮದ ನಿವಾಸಿಗಳಾದ ವಿಜಯಕುಮಾರ ಹಳ್ಳಿ ಮತ್ತು ಕೋಟೆಪ್ಪ ವರ್ದಿ ಹೇಳಿದರು.
ನಟ ಯಶ್ ಜನ್ಮದಿನದ ಅಂಗವಾಗಿ ಜ.7ರಂದು ರಾತ್ರಿ ಅವರ ಕಟೌಟ್ ಅಳವಡಿಸುವಾಗ ವಿದ್ಯುತ್ ಸ್ಪರ್ಶಿಸಿ, ಮುರಳಿ ನಡುವಿನಮನೆ, ನವೀನ ಗಾಜಿ ಹಾಗೂ ಹನುಮಂತಪ್ಪ ಹರಿಜನ ಮೃತಪಟ್ಟಿದ್ದರು. ಇನ್ನು ಮೂವರು ಯುವಕರು ಗಾಯಗೊಂಡಿದ್ದರು.