ರಾಮನಗರ: ಕಾಂಗ್ರೆಸ್ನವರು ಕೇವಲ ಅಧಿಕಾರ ಹಿಡಿಯುವ ಆಸೆಯಿಂದ ಮತ್ತೆ ಮೇಕೆದಾಟು ಪಾದಯಾತ್ರೆ ಆರಂಭಿಸುತ್ತಿದ್ದಾರೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿಶನಿವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚನ್ನಪಟ್ಟಣದ ತಗಚಗೆರೆಯಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ಇನ್ನೂ ಹತ್ತು ಪಾದಯಾತ್ರೆ ಮಾಡಲಿ.ಜನರಿಗೆ ಅನುಕೂಲ ಆಗುವುದಾದರೆ ನಾನು ಬರುತ್ತೇನೆ. ಆದರೆ ಪಾದಯಾತ್ರೆಯಿಂದ ಅಣೆಕಟ್ಟೆ ನಿರ್ಮಾಣ ಅಸಾಧ್ಯ. ಕಾನೂನು ಹೋರಾಟ ಮಾಡಬೇಕು’ ಎಂದರು.
ದೇಶಕ್ಕಾಗಿ ಹೋರಾಟ ಮಾಡಿದ ಕಾಂಗ್ರೆಸ್ ಎಂದೋ ಸತ್ತುಹೋಗಿದೆ.ಈಗ ಇರುವ ಕಾಂಗ್ರೆಸ್ ಬೇರೆ. ಕಾಂಗ್ರೆಸ್ ಅನ್ನು ಮುಚ್ಚಬೇಕು, ಮತ್ತೆ ಬಳಕೆ ಮಾಡಬಾರದು ಎಂದು ಮಹಾತ್ಮ ಗಾಂಧಿ ಅವರೇ ಹಿಂದೆ ಹೇಳಿದ್ದರು ಎಂದು ಹೇಳಿದರು.
ಹಗುರವಾಗಿ ಮಾತನಾಡಿಲ್ಲ: ‘ಮಂಡ್ಯದಲ್ಲಿ ಮಾತನಾಡುವಾಗ ಹಿಜಾಬ್–ಗಿಜಾಬ್ ಗೊತ್ತಿಲ್ಲ. ಅದಕ್ಕಿಂತ ಮಕ್ಕಳ ಭವಿಷ್ಯ ಮುಖ್ಯ ಎಂದಿದ್ದೆ. ನಾನು ಮಾತಿನ ಭರದಲ್ಲಿ ಹೀಗೆ ಹೇಳಿದ್ದೇನೆ ಹೊರತು ಯಾವುದೇ ಸಮಾಜಕ್ಕೆ, ಧರ್ಮಕ್ಕೆ ಅಪಚಾರ ಮಾಡಿಲ್ಲ’ ಎಂದು ಸ್ಪಷ್ಟಪಡಿಸಿದರು.