ಬೆಳಗಾವಿ: ‘ರಾಜ್ಯದ ಶಾಲಾ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಿಗೆ ಅನ್ವಯವಾಗುವಂತೆ ಕ್ರೀಡಾ ನೀತಿ ರೂಪಿಸಲು ಕ್ರಮ ಕೈಗೊಳ್ಳುತ್ತೇವೆ’ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ವಿಧಾನ ಪರಿಷತ್ತಿಗೆ ತಿಳಿಸಿದರು. ಕಾಂಗ್ರೆಸ್ನ ಐವನ್ ಡಿಸೋಜ ಮಂಡಿಸಿದ ಗಮನ ಸೆಳೆಯುವ ಸೂಚನೆಗೆ ಅವರು ಮಂಗಳವಾರ ಉತ್ತರಿಸಿದರು.
‘ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಳುಗಳು ಸಾಧನೆ ಮಾಡಿದ ಬಳಿಕ ಅವರಿಗೆ ಸನ್ಮಾನ ಮಾಡುತ್ತೇವೆ. ಆದರೆ ಸಾಧನೆಗೆ ಪೂರಕ ವಾತಾವರಣ ರೂಪಿಸುವ ಕ್ರೀಡಾ ನೀತಿ ಅಗತ್ಯವಿದೆ’ ಎಂದು ಐವನ್ ಹೇಳಿದರು.
‘ಕ್ರೀಡೆಗಳ ವಿಚಾರದಲ್ಲೂ ತಾರತಮ್ಯ ಮಾಡಲಾಗುತ್ತಿದೆ. ಕ್ರಿಕೆಟ್ಗೆ ಸಿಗುವಷ್ಟು ಉತ್ತೇಜನ ಇತರ ಕ್ರೀಡೆಗಳಿಗೆ ಸಿಗುತ್ತಿಲ್ಲ. ಇದು ಕೊನೆಯಾಗಬೇಕು’ ಎಂದು ಎಂ.ಸಿ.ವೇಣುಗೋಪಾಲ್ ಒತ್ತಾಯಿಸಿದರು. ‘ಬಹುತೇಕ ಶಾಲಾ ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರೇ ಇಲ್ಲ. ಮೊದಲು ಈ ಕೊರತೆ ನೀಗಿಸಿ’ ಎಂದು ಬಿಜೆಪಿಯ ಅ.ದೇವೇಗೌಡ ಆಗ್ರಹಿಸಿದರು.