ಬೆಂಗಳೂರು: ಚೆಕ್ ಬೌನ್ಸ್ ಆರೋಪದ ಪ್ರಕರಣದಲ್ಲಿ ಮಾಜಿ ಶಾಸಕ ಹಾಗೂ ದಿವಂಗತ ಆರ್.ಎಲ್.ಜಾಲಪ್ಪ ಅವರ ಪುತ್ರ ಜೆ.ನರಸಿಂಹ ಸ್ವಾಮಿ ಅವರನ್ನು ತಪ್ಪಿತಸ್ಥ ಎಂದು ತೀರ್ಮಾನಿಸಿರುವ ಜನಪ್ರತಿನಿಧಿಗಳ ಕೋರ್ಟ್ ₹ 65 ಲಕ್ಷ ದಂಡ ವಿಧಿಸಿದೆ.
ಈ ಕುರಿತಂತೆ ಪ್ರಕಾಶ್ ಕುಮಾರ್ ಯರಪ್ಪ ನೀಡಿದ್ದ ದೂರಿನ ವಿಚಾರಣೆ ನಡೆಸಿದ, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ‘ದ ನ್ಯಾಯಾಧೀಶೆ ಜೆ.ಪ್ರೀತ್, ‘ಆರೋಪಿಯು ದಂಡ ಪಾವತಿ ಮಾಡದೇ ಹೋದಲ್ಲಿ ಆರು ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕು‘ ಎಂದು ಸೋಮವಾರ ಆದೇಶಿಸಿದ್ದಾರೆ.
‘ದಂಡದ ಮೊತ್ತ ₹ 65 ಲಕ್ಷದಲ್ಲಿ ₹ 64 ಲಕ್ಷದ 95 ಸಾವಿರವನ್ನು ದೂರುದಾರ ಪ್ರಕಾಶ್ ಕುಮಾರ್ ಯರಪ್ಪ ಅವರಿಗೆ ನೀಡಬೇಕು. ಉಳಿದ ₹ 5 ಸಾವಿರ ಮೊತ್ತವನ್ನು ರಾಜ್ಯ ಸರ್ಕಾರಕ್ಕೆ ಪಾವತಿಸಬೇಕು‘ ಎಂದು ಆದೇಶದಲ್ಲಿ ವಿವರಿಸಲಾಗಿದೆ.