ಬೆಂಗಳೂರು: ಅಕ್ರಮವಾಗಿ ಅದಿರು ಮಾರಾಟ ಮತ್ತು ರಫ್ತು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರ ಕುಟುಂಬದ ಸದಸ್ಯರಿಗೆ ಸೇರಿದ 118 ಸ್ಥಿರಾಸ್ತಿಗಳನ್ನು ಜಪ್ತಿ ಮಾಡುವಂತೆ ಕೋರಿದ್ದ ಸಿಬಿಐ ಮನವಿಯನ್ನು ಜನಪ್ರತಿನಿಧಿಗಳ ಕೋರ್ಟ್ ಭಾಗಶಃ ಮಾನ್ಯ ಮಾಡಿದೆ.
ಈ ಕುರಿತಂತೆ ಸಿಬಿಐ ದಾಖಲಿಸಿದ್ದ ಅರ್ಜಿಯನ್ನು, 'ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ'ದ ನ್ಯಾಯಾಧೀಶ ಬಿ.ಜಯಂತ್ ಕುಮಾರ್ ವಿಚಾರಣೆ ನಡೆಸಿ ಇದೇ 12ರಂದು ಆದೇಶ ಪ್ರಕಟಿಸಿದ್ದು, ರೆಡ್ಡಿ ಮತ್ತು ಅವರ ಪತ್ನಿ ಲಕ್ಷ್ಮಿ ಅರುಣಾ ಹೆಸರಿನಲ್ಲಿರುವ ಕೆಲವು ಸ್ಥಿರಾಸ್ತಿಗಳ ಲಗತ್ತಿಗೆ ಅನುಮತಿ ನೀಡಿದೆ.
'ಸಿಬಿಐ ಪಟ್ಟಿ ಮಾಡಿರುವ 118 ಆಸ್ತಿಗಳಲ್ಲಿ 77 ಅನ್ನು ಮಾತ್ರ ಲಗತ್ತಿಸಲು ನ್ಯಾಯಾಲಯ ಅನುಮತಿ ನೀಡಿದೆ. ಪ್ರಕರಣದಲ್ಲಿ ಒಟ್ಟು 21 ಜನ ಆರೋಪಿಗಳಿದ್ದು, 6.05 ಲಕ್ಷ ಮೆಟ್ರಿಕ್ ಟನ್ ಕಬ್ಬಿಣದ ಅದಿರಿನ ಅಕ್ರಮ ಮಾರಾಟ ಮತ್ತು ರಫ್ತಿಗೆ ಸಂಬಂಧಿಸಿದಂತೆ ಪ್ರತಿವಾದಿಗಳು ಸರ್ಕಾರದ ಬೊಕ್ಕಸಕ್ಕೆ ₹ 198 ಕೋಟಿ ನಷ್ಟ ಉಂಟು ಮಾಡಿದ್ದಾರೆ' ಎಂದು ಸಿಬಿಐ ಪ್ರತಿಪಾದಿಸಿತ್ತು.
'ಷೆಡ್ಯೂಲ್ ಪ್ರಕಾರ ಲಗತ್ತಿಸಲು ಕೋರಿರುವ ಸ್ಥಿರಾಸ್ತಿಗಳು ₹ 65.05 ಕೋಟಿಗಳ ಮೌಲ್ಯ ಹೊಂದಿವೆ. ಆದರೆ, ಅಪರಾಧದ ಆದಾಯವನ್ನು ಪ್ರತಿವಾದಿಯು ತಮ್ಮ ಹೆಸರಿನಲ್ಲಿ ಮತ್ತು ಪತ್ನಿಯ ಕಂಪನಿಗಳ ಹೆಸರಿನಲ್ಲಿ ಸಂಪಾದಿಸಿದ್ದಾರೆ' ಎಂದು ಆದೇಶದಲ್ಲಿ ವಿವರಿಸಲಾಗಿದೆ.