ಮೈಸೂರು: ‘ಕೋವಿಡ್ ರೂಪಾಂತರಿ ತಳಿ ಸೋಂಕು ಹರಡದಂತೆ ಕೇರಳ ಗಡಿ ಭಾಗದ ಜಿಲ್ಲೆಗಳಲ್ಲಿ ನಿಗಾ ವಹಿಸುವಂತೆ ಸೂಚಿಸಲಾಗಿದ್ದು, ಡಿ.24ರಿಂದಲೇ ನಿತ್ಯ 5 ಸಾವಿರ ಆರ್ಟಿಪಿಸಿಆರ್ ಪರೀಕ್ಷೆಯ ಗುರಿ ನೀಡಲಾಗಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಇಲ್ಲಿ ಪತ್ರಕರ್ತರೊಂದಿಗೆ ಶನಿವಾರ ಮಾತನಾಡಿದ ಅವರು, ‘ಕೇರಳದ ನಂತರ ಕರ್ನಾಟಕದಲ್ಲಿ ಕೋವಿಡ್ ದೃಢ ಪ್ರಕರಣಗಳು ಕಂಡುಬರುತ್ತಿವೆ. ಆ ರಾಜ್ಯದ ನಂತರ ನಮ್ಮಲ್ಲೇ ಹೆಚ್ಚು ಪರೀಕ್ಷೆಯನ್ನೂ ಮಾಡಲಾಗುತ್ತಿದೆ’ ಎಂದರು.
‘ಕೇರಳ ಗಡಿಭಾಗದ ಮಂಗಳೂರು, ಕೊಡಗು, ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಹಾಗೂ ಪರೀಕ್ಷೆಗಳನ್ನು ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಹೇಳಿದರು.
‘ರಾಜ್ಯದಲ್ಲಿ ಕೋವಿಡ್ನಿಂದ ನಾಲ್ವರು ಮೃತಪಟ್ಟಿದ್ದರೂ ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿದ್ದರು ಎಂಬುದು ವರದಿಯಲ್ಲಿ ಗೊತ್ತಾಗಿದೆ. ಶನಿವಾರ ಬೆಳಿಗ್ಗೆವರೆಗೆ 175 ಸಕ್ರಿಯ ಪ್ರಕರಣಗಳಿದ್ದವು. 5 ಸಾವಿರ ಪರೀಕ್ಷೆ ಮಾಡುವುದರಿಂದ ಇನ್ನೂ ಹೆಚ್ಚಿನ ಚಿತ್ರಣ ದೊರೆಯಲಿದೆ’ ಎಂದರು.
‘ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಐಸಿಯು ಹಾಸಿಗೆ, ವೆಂಟಿಲೇಟರ್, ಆಮ್ಲಜನಕ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲು ಸೂಚಿಸಲಾಗಿದೆ. ತಾಂತ್ರಿಕ ಸಲಹಾ ಸಮಿತಿ ಹೇಳಿರುವ ಮಾರ್ಗದರ್ಶನಗಳನ್ನು ಪಾಲಿಸಲಾಗುತ್ತಿದೆ. ಕೋವಿಡ್ ಸಂಬಂಧ ರಚಿಸಿರುವ ಉಪ ಸಮಿತಿ ಸಭೆ ಮಂಗಳವಾರ ನಡೆಯಲಿದ್ದು, ಅಲ್ಲಿ ವಿಸ್ತೃತವಾಗಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.