ಹುಬ್ಬಳ್ಳಿ: ರೌಡಿ ಸೈಕಲ್ ರವಿಯೊಂದಿಗೆ ಶಾಸಕ ಎಂ.ಬಿ. ಪಾಟೀಲ ಹೊಂದಿರುವ ನಂಟಿನ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಶಾಸಕ ಜಗದೀಶ ಶೆಟ್ಟರ್ ಮಂಗಳವಾರ ಇಲ್ಲಿ ಆಗ್ರಹಿಸಿದರು.
‘ಒಂದೆರಡು ಬಾರಿ ಮಾತನಾಡಿದ್ದರೆ ನಿರ್ಲಕ್ಷಿಸಬಹುದಿತ್ತು. ಆದರೆ, ಅವರು 80ಕ್ಕೂ ಹೆಚ್ಚು ಬಾರಿ ಮಾತನಾಡಿದ್ದು, ರೌಡಿಯೊಂದಿಗೆ ಏನು ಮಾತನಾಡಿದ್ದಾರೆ ಎಂಬುದು ತನಿಖೆ ಆಗಬೇಕು’ ಎಂದು ಒತ್ತಾಯಿಸಿದರು.
‘ಸಂಪರ್ಕ ನನಗಿಲ್ಲ’
ವಿಜಯಪುರ: ‘ದುಷ್ಟರ ಸಂಪರ್ಕ ನನಗಿಲ್ಲ. ಅದರ ಅವಶ್ಯಕತೆಯೂ ಇಲ್ಲ. ಮಾಧ್ಯಮದಲ್ಲಿ ಬಿತ್ತರಗೊಂಡ ಸುದ್ದಿ ಸತ್ಯಕ್ಕೆ ದೂರವಾದುದು’ ಎಂದು ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ತಿಳಿಸಿದರು.
‘ಸೈಕಲ್ ರವಿ ಯಾರು ಎಂಬುದೇ ಗೊತ್ತಿಲ್ಲ. ಸಿಸಿಬಿ ಪೊಲೀಸರು ಲೀಕ್ ಮಾಡಿದ್ದಾರೆ ಎನ್ನಲಾದ ಮೊಬೈಲ್ ನಂಬರ್ ಮಾಜಿ ಸಚಿವ ಅಂಬರೀಷ್ ಅವರ ಆಪ್ತ, ಕೆಪಿಸಿಸಿ ಸದಸ್ಯ ಮಂಡ್ಯದ ಸಚ್ಚಿದಾನಂದ ಅವರದ್ದು. ನನ್ನ ಚಾರಿತ್ರ್ಯ ಹರಣ ಮಾಡುವ ಕೆಲಸ ನಡೆದಿದೆ. ಇದರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವೆ’ ಎಂದು ಮಂಗಳವಾರ ಇಲ್ಲಿ ಎಚ್ಚರಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ಪೊಲೀಸ್ ಕಮಿಷನರ್ ಟಿ. ಸುನೀಲ್ಕುಮಾರ್, ‘ರೌಡಿ ಜತೆ ರಾಜಕಾರಣಿಗಳ ನಂಟು ಇತ್ತು ಎಂಬ ಸುದ್ದಿ ಹರಡಿದೆ. ಆ ಸುದ್ದಿ ಹರಡಿಸಿದ್ದು ಯಾರು ಎಂಬುದು ಗೊತ್ತಿಲ್ಲ, ಮತ್ತು ಅದನ್ನು ಮಾಧ್ಯಮಗಳಿಗೆ ಖಾತ್ರಿಪಡಿಸಿದವರು ಯಾರು?. ನಾವಂತೂ ಹೇಳಿಲ್ಲ’ ಎಂದರು.
* ರೌಡಿ ಜತೆ ರಾಜಕಾರಣಿಗಳ ನಂಟು ಇತ್ತು ಎಂಬ ಸುದ್ದಿ ಹರಡಿದೆ. ಆ ಸುದ್ದಿ ಹರಡಿಸಿದ್ದು ಯಾರು ಎಂಬುದು ಗೊತ್ತಿಲ್ಲ. ತನಿಖೆಯಲ್ಲಿ ತಿಳಿದುಬಂದಿದೆ ಎಂದಷ್ಟೇ ಕೆಲವರು ಹೇಳುತ್ತಿದ್ದಾರೆ. ಅದನ್ನು ಮಾಧ್ಯಮಗಳಿಗೆ ಖಾತ್ರಿಪಡಿಸಿದವರು ಯಾರು?. ನಾವಂತೂ ಹೇಳಿಲ್ಲ