ಬೆಂಗಳೂರು: ‘ನನಗೂ ಆಕಾಶದಲ್ಲಿ ತೇಲಾಡಬೇಕೆಂಬ ಆಸೆಯಿದೆ. ಹಾಗೆಂದು ಸಾಧ್ಯವೇ. ಆಸೆಗಳಿಗೂ ಕೆಲವೊಂದು ಇತಿಮಿತಿ ಹಾಕಿಕೊಳ್ಳಬೇಕು’ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.
ಮಾಧ್ಯಮ ಪ್ರತಿನಿಧಿಗಳ ಜೊತೆ ಶನಿವಾರ ಮಾತನಾಡಿದ ಅವರು, ‘ಕೆಪಿಸಿಸಿ ಪ್ರಚಾರ ಸಮಿತಿ ಕೈತಪ್ಪಿ ಹೋಗಿದೆ ಅಂತ ಬೇಸರ ಮಾಡಿಕೊಳ್ಳಲು ಸಾಧ್ಯವೇ. ಡಿಕೆಶಿ ಕೈಯಿಂದ ಪ್ರಚಾರ ಸಮಿತಿ ತಪ್ಪಿತು ಎಂದು ಬೇರೆಯವರು ಕುಣಿಯಬೇಕಷ್ಟೆ’ ಎಂದರು.
‘ಪ್ರಚಾರ ಸಮಿತಿ ಅದ್ಯಕ್ಷ ಸ್ಥಾನವನ್ನು ಹಿರಿಯರಾದ ಎಚ್.ಕೆ. ಪಾಟೀಲ ಅವರಿಗೆ ನೀಡಲಾಗಿದೆ. ಹಿಂದೆ ಎಸ್.ಎಂ. ಕೃಷ್ಣ, ಸಿದ್ದರಾಮಯ್ಯ, ಪರಮೇಶ್ವರ ಕೂಡ ಇದೇ ಹುದ್ದೆಯಲ್ಲಿದ್ದರು. ಪಕ್ಷಕ್ಕಾಗಿ ಕೆಲಸ ಮಾಡಿದವರಿಗೆ ಉತ್ತಮ ಅವಕಾಶ ಸಿಗಲಿದೆ. ಯಾರೇ ಆದರೂ ಅಲ್ಲಿಯವರೆಗೆ ಕಾಯಬೇಕು’ ಎಂದರು.
‘ಪರಮೇಶ್ವರ ಬಳಿಯಲ್ಲೇ ಗೃಹ ಖಾತೆ ಇರಬೇಕಿತ್ತು’ ಎಂಬ ಎಚ್.ಡಿ. ರೇವಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ನಾನು ಬೇರೆಯವರ ಮಾತಿಗೆ ಉತ್ತರ ಕೊಡೋಕೆ ಆಗಲ್ಲ. ಹೈಕಮಾಂಡ್ ಹೇಳಿದ ಮೇಲೆ ಅದೇ ಅಂತಿಮ’ ಎಂದರು.
*ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬ ಕತ್ತಿ ಹೇಳಿಕೆಗೆ, ‘ನಾನೂ ಅವರ ಬಳಿ ಜ್ಯೋತಿಷ ಕೇಳಬೇಕು’ ಎಂದು ಸಚಿವರು ವ್ಯಂಗ್ಯವಾಡಿದರು.