ಕಲಬುರ್ಗಿ: ‘ದಲಿತ’ ಪದ ಸಂಘಟನಾತ್ಮಕ ಶಕ್ತಿಯನ್ನು ಹೊಂದಿದೆ. ದೇಶದಾದ್ಯಂತ ವಿದ್ಯುತ್ ಸಂಚಲನ ಮೂಡಿಸುತ್ತದೆ. ಆದ್ದರಿಂದ ದಲಿತ ಪದ ಬಳಕೆ ಇರಬೇಕು’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಅರವಿಂದ ಮಾಲಗತ್ತಿ ಪ್ರತಿಪಾದಿಸಿದರು.
ನಗರದ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ‘ಅಂಬೇಡ್ಕರ್ ಚಿಂತನೆಗಳ ಜಿಜ್ಞಾಸೆ’ ಕುರಿತ ಎರಡು ದಿನಗಳ ಕಮ್ಮಟದಲ್ಲಿ ಅವರು ಮಾತನಾಡಿದರು.
‘ದಲಿತ ಪದವನ್ನು ಬಳಸದಂತೆ ಮಾಧ್ಯಮಗಳಿಗೆ ನಿರ್ದೇಶಿಸಬೇಕು ಎಂದು ಬಾಂಬೆ ಹೈಕೋರ್ಟ್ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಈಚೆಗೆ ಸೂಚಿಸಿದೆ. ಸರ್ಕಾರಿ ದಾಖಲೆಗಳಿಂದ ಆ ಪದವನ್ನು ತೆಗೆದು ಹಾಕುವಂತೆ ವ್ಯಕ್ತಿಯೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದರು. ದಲಿತ ಪದವನ್ನು ತೆಗೆದು ಹಾಕಿದರೆ ಸಂಘಟನೆಗಳು ನೆಲ ಕಚ್ಚುತ್ತವೆ ಎಂಬ ಹುನ್ನಾರ ಇದರ ಹಿಂದೆ ಇದೆ’ ಎಂದು ಆರೋಪಿಸಿದರು.
‘ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಅಂಬೇಡ್ಕರ್ ಅವರ ಪೂರ್ಣ ಹೆಸರನ್ನು ಬರೆಯಬೇಕು ಎಂದು ಆದೇಶಿಸಿದ್ದಾರೆ. ಇದು ಸ್ವಾಗತಾರ್ಹ. ಆದರೆ, ಆದಿತ್ಯನಾಥರ ತಂದೆಯ ಹೆಸರು ರಾಮ್ಜಿ ಎಂಬುದು ಎಲ್ಲರಿಗೂ ಗೊತ್ತಾಗಲಿ ಎಂಬುದು ಅವರ ಉದ್ದೇಶವಾಗಿದೆ’ ಎಂದು ದೂರಿದರು.
‘ರಾಮ, ಕೃಷ್ಣನ ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತದೆ. ಆದರೆ ಅವರ ಹೆಸರಿನ ಬಗ್ಗೆ ಚರ್ಚೆ ನಡೆಯುವುದಿಲ್ಲ. ಆದರೆ, ಅಂಬೇಡ್ಕರ್ ವಿಷಯದಲ್ಲಿ ಅವರ ವಿಚಾರ ಧಾರೆಗಳ ಬಗ್ಗೆ ಚರ್ಚಿಸದೇ ಹೆಸರಿನ ಬಗ್ಗೆ ಚರ್ಚೆಗಳಾಗುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.