ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಅನುದಾನಿತ ಶಾಲೆ-ಕಾಲೇಜಿನ ಎಲ್ಲ ಸಿಬ್ಬಂದಿಗೂ ಪರಿಹಾರ ಘೋಷಿಸಿ: ಸಿದ್ದರಾಮಯ್ಯ

Last Updated 16 ಜೂನ್ 2021, 11:36 IST
ಅಕ್ಷರ ಗಾತ್ರ

ಬೆಂಗಳೂರು: ‘ಖಾಸಗಿ ಅನುದಾನಿತ ಶಾಲೆ-ಕಾಲೇಜುಗಳಲ್ಲಿ ಸರ್ಕಾರಿ ಸಂಬಳ ಪಡೆಯದೆ ದುಡಿಯುತ್ತಿರುವ ಎಲ್ಲ ಸಿಬ್ಬಂದಿಗೂ ಪರಿಹಾರ ಘೋಷಿಸಬೇಕು’ ಎಂದು ರಾಜ್ಯ ಸರ್ಕಾರವನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಕೊರೊನಾ ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿರುವ ರಾಜ್ಯದ ಜನರಿಗೆ ಸರ್ಕಾರ ಬಿಡಿಗಾಸಿನ ಪರಿಹಾರದ ಪ್ಯಾಕೇಜ್ ಘೋಷಿಸಿದೆ. ಅದರಲ್ಲಿ ಅನುದಾನರಹಿತ ಶಾಲೆಗಳ ಶಿಕ್ಷಕರನ್ನೂ ಸೇರಿಸಲಾಗಿದೆ. ಈ ಪ್ಯಾಕೇಜ್‍ನ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಜೂನ್ 14 ಕೊನೆಯ ದಿನ ಎಂದು ತಿಳಿಸಲಾಗಿದೆ. ಆದರೆ, ಈ ಪ್ಯಾಕೇಜ್ ಘೋಷಿಸುವಾಗ ಖಾಸಗಿ ಅನುದಾನಿತ ಶಾಲೆಗಳ ಖಾಯಂ ಅಲ್ಲದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಸರ್ಕಾರ ಕೈ ಬಿಟ್ಟಿದೆ’ ಎಂದಿದ್ದಾರೆ.

‘ಅನುದಾನಿತ ಶಾಲೆ- ಕಾಲೇಜುಗಳಲ್ಲೂ ₹ 3 ಸಾವಿರದಿಂದ ₹ 5 ಸಾವಿರ ಮಾತ್ರ ಪಡೆದು ಕೆಲಸ ಮಾಡುವ ಸಾಕಷ್ಟು ಅತಿಥಿ ಶಿಕ್ಷಕರು, ಉಪನ್ಯಾಸಕರು, ಸಿಬ್ಬಂದಿ ಇದ್ದಾರೆ. ಬಹು ದೊಡ್ಡ ಸಂಖ್ಯೆಯಲ್ಲಿರುವ ಇವರನ್ನು ಸರ್ಕಾರದ ಪ್ಯಾಕೇಜ್‍ನಲ್ಲಿ ಸೇರಿಸದಿರುವುದು ನ್ಯಾಯಸಮ್ಮತವಲ್ಲ. ಮೊದಲ ಅಲೆಯಲ್ಲೂ ಅನುದಾನಿತ ಶಾಲೆ ಕಾಲೇಜುಗಳ ಸಿಬ್ಬಂದಿ ಹೈರಾಣಾಗಿದ್ದರು. ಆಗಲೂ ಸರ್ಕಾರ ಅವರ ನೆರವಿಗೆ ಬರಲಿಲ್ಲ. ಒಂದೂವರೆ ವರ್ಷದಿಂದ ಸಂಬಳಗಳಿಲ್ಲದೆ ಈ ಕುಟುಂಬಗಳು ವಿಪರೀತ ಸಂಕಷ್ಟದಲ್ಲಿವೆ’ ಎಂದೂ ಹೇಳಿದ್ದಾರೆ.

‘ಖಾಸಗಿ ಅನುದಾನಿತ ಶಾಲಾ-ಕಾಲೇಜುಗಳ ಅತಿಥಿ ಶಿಕ್ಷಕರು ಬೀದಿ ಬದಿ ತರಕಾರಿ, ಹೂ, ಹಣ್ಣು ಮಾರಾಟ ಮಾಡುತ್ತಿರುವುದು, ನರೇಗಾ ಕೂಲಿ ಕೆಲಸಕ್ಕೆ ಹೋಗಿರುವ ಅಸಂಖ್ಯಾತ ಪ್ರಕರಣಗಳನ್ನು ಹಾಗೂ ಸಂಕಷ್ಟ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳನ್ನು ಮಾಧ್ಯಮಗಳು ವರದಿ ಮಾಡಿವೆ. ಸಾಮಾಜಿಕ ತಾಣಗಳಲ್ಲಿ ಇವರು ತಮ್ಮ ಕಷ್ಟಗಳನ್ನು ಹೇಳಿಕೊಂಡಿದ್ದಾರೆ. ಇಷ್ಟಾದರೂ ಸರ್ಕಾರ ಅವರ ಕಡೆಗೆ ಗಮನ ಹರಿಸದಿರುವುದು ಅಕ್ಷಮ್ಯ ಸಂಗತಿ’

‘ಸರ್ಕಾರದ ಪ್ಯಾಕೇಜ್‍ನಲ್ಲಿ ಖಾಸಗಿ ಕಾಲೇಜುಗಳ ಬೋಧಕ, ಬೋಧಕೇತರ ಸಿಬ್ಬಂದಿಗೆ ಪರಿಹಾರ ಘೋಷಿಸಿಲ್ಲ. ಅವರಿಗೂ ಪರಿಹಾರ ಘೋಷಿಸಬೇಕು.

ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಬೇಕು ಅಥವಾ ಅರ್ಜಿ ಕರೆದು ಭಿಕ್ಷೆಯಂತೆ ಒಂದೆರಡು ಸಾವಿರ ನೀಡುವ ಬದಲಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಈ ಸಿಬ್ಬಂದಿ ವಿವರಗಳನ್ನು ಪಡೆದು ನೇರವಾಗಿ ಅವರ ಖಾತೆಗಳಿಗೆ ಪರಿಹಾರದ ಹಣ ವರ್ಗಾಯಿಸಬೇಕು’ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT