ಶಿವಮೊಗ್ಗ: ಸಚಿವ ಡಿ.ಕೆ. ಶಿವಕುಮಾರ್ ಅವರು ಗೊಡ್ಡು ಬೆದರಿಕೆ ಹಾಕುವುದನ್ನು ಬಿಟ್ಟು ನಾಗರಿಕರಂತೆ ಮಾತನಾಡಬೇಕು ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಸಲಹೆ ನೀಡಿದರು.
ಶನಿವಾರ ಮಾತನಾಡಿದ ಅವರು, ‘ಡಿ.ಕೆ. ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ನಡೆದಿದೆ. ಈ ಸಂದರ್ಭದಲ್ಲಿ ಅವರು ತನಿಖೆಗೆ ಸಹಕಾರ ನೀಡುವಂತಹ ಹೇಳಿಕೆ ಕೊಡಬೇಕು. ಅದನ್ನು ಬಿಟ್ಟು ಏನು ಮಾಡಬೇಕೆಂದು ನನಗೂ ಗೊತ್ತಿದೆ ಎಂದು ಬೆದರಿಕೆ ಹಾಕುವ ರೀತಿ ಹೇಳಿಕೆ ನೀಡುತ್ತಿರುವುದು ಖಂಡನೀಯ’ ಎಂದರು.
ಬ್ರಿಗೇಡ್ ಪ್ರಾರಂಭಿಸಲ್ಲ: ‘ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಪುನಃ ಆರಂಭವಾಗುತ್ತಿದೆ ಎಂದು ಕೆಲವು ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿರುವುದು ಸತ್ಯಕ್ಕೆ ದೂರವಾದುದು. ನಾನು ಬಾಗಲಕೋಟೆಗೆ ಭೇಟಿ ನೀಡುತ್ತಿದ್ದೇನೆ ಎಂದರೆ ಬ್ರಿಗೇಡ್ ಪ್ರಾರಂಭಿಸುತ್ತೇನೆ ಎಂದಲ್ಲ. ಅಲ್ಲಿ ಮದುವೆ ಕಾರ್ಯಕ್ರಮ ಇದೆ. ಅದರಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದೇನೆ. ಅದನ್ನೇ ತಪ್ಪಾಗಿ ಅರ್ಥೈಸಲಾಗುತ್ತಿದೆ’ ಎಂದು ತಿಳಿಸಿದರು.