ಬೆಂಗಳೂರು: ರಾಜ್ಯಾದ್ಯಂತ ಏಪ್ರಿಲ್ 27ರ ರಾತ್ರಿಯಿಂದ 14 ದಿನ 'ಕೊರೋನಾ ಕರ್ಫ್ಯೂ' ಜಾರಿ ಹಿನ್ನಲೆಯಲ್ಲಿನಾಳೆಯಿಂದ ನಡೆಯಬೇಕಿದ್ದ ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ಪರೀಕ್ಷೆಗಳನ್ನು ಮುಂದಕ್ಕೆ ಹಾಕಲಾಗಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು;ಎಂಜಿನಿಯರಿಂಗ್, ಪಾಲಿಟೆಕ್ನಿಕ್ನ ಎಲ್ಲ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಎರಡನೇ ಅಲೆಯ ನಡುವೆ ನಾಡಿನ ಕ್ಷೇಮಕ್ಕಾಗಿ ಕೊರೋನಾ ಕರ್ಫ್ಯೂ ವಿಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಪರೀಕ್ಷೆಗಳು ಯಾವಾಗ ನಡೆಯುತ್ತವೆ ಎಂಬುದನ್ನು ಕೊರೋನಾ ಕರ್ಫ್ಯೂ ಮುಗಿದ ನಂತರ ತಿಳಿಸಲಾಗುವುದು ಎಂದು ಡಿಸಿಎಂ ಹೇಳಿದ್ದಾರೆ.
ವಿಟಿಯು ಪರೀಕ್ಷೆ ಮುಂದಕ್ಕೆ
ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ದಿಂದ ಏ.27ರಿಂದ ನಿಗದಿಯಾಗಿದ್ದ ಪರೀಕ್ಷೆಗಳನ್ನು ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣದಿಂದ ಮುಂದೂಡಲಾಗಿದೆ.
ಮುಂದಿನ ದಿನಾಂಕವನ್ನು ಮುಂಚಿತವಾಗಿ ಪ್ರಕಟಿಸಲಾಗುವುದು ಎಂದು ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಇ. ರಂಗಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.