ಅರಣ್ಯ ವ್ಯಾಪ್ತಿ ಹೆಚ್ಚಿಸಲು ಮತ್ತು ರೈತರ ಅಮೂಲ್ಯ ಬೆಳೆ ಮತ್ತು ಜೀವ ಉಳಿಸಲು ಅರಣ್ಯ ಪ್ರದೇಶಗಳನ್ನು ಒಗ್ಗೂಡಿಸಿ ವನ್ಯಜೀವಿಗಳ ಸುಗಮ ಓಡಾಟಕ್ಕೆ ಅನುವು ಮಾಡಿಕೊಡುವ ಪ್ರಸ್ತಾವವನ್ನು ಅರಣ್ಯ ಇಲಾಖೆ ಸಂಪುಟದ ಮುಂದೆ ತಂದಿತ್ತು. ಅರಣ್ಯ ಪ್ರದೇಶಗಳ ಮಧ್ಯದಲ್ಲಿ, ಅಂಚಿನಲ್ಲಿ ಮತ್ತು ಕಾರಿಡಾರ್ ಪ್ರದೇಶಗಳಲ್ಲಿ ಇರುವ ಆದಿವಾಸಿಗಳು, ಪಟ್ಟಾ ಭೂಮಿ ಹೊಂದಿರುವವರು, ರೈತರು ಸ್ವಯಂ ಪ್ರೇರಣೆಯಿಂದ ತಮ್ಮ ಜಮೀನನ್ನು ಅರಣ್ಯ ಇಲಾಖೆಗೆ ನೀಡಲು ಮುಂದೆ ಬಂದರೆ ಆ ಭೂಮಿಯನ್ನು ಯಾವ ದರದಲ್ಲಿ ನೀಡಿ ಪಡೆಯಬೇಕು ಎಂಬ ಬಗ್ಗೆ ಈ ಮಾರ್ಗಸೂಚಿ ರಚಿಸಲಾಗಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ 2012 ರಲ್ಲಿ ಹೊರಡಿಸಿರುವ ಕ್ರೋಡೀಕೃತ ಮಾರ್ಗಸೂಚಿ ರೀತಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವಾಸಿಸುವ ಮತ್ತು ಹೊರಬರಲು ಸಿದ್ಧವಿರುವ ಕುಟುಂಬಗಳಿಗೆ ಪುನರ್ ವಸತಿ ಕಲ್ಪಿಸಲು ಪ್ರತಿ ಕುಟುಂಬಕ್ಕೆ ₹15 ಲಕ್ಷ ನೀಡುವ ಕುರಿತಂತೆ ಪ್ರಸ್ತಾವಿಸಲಾಗಿದೆ.