ಬೆಂಗಳೂರು: ಬರ ಕಾರಣ ಬೆಳೆ ನಷ್ಟ, ಕುಡಿಯುವ ನೀರು ಪೂರೈಕೆ ಮತ್ತು ಜಾನುವಾರುಗಳ ಸಂರಕ್ಷಣೆ ಮತ್ತಿತರ ಪರಿಹಾರ ಕಾರ್ಯಗಳಿಗಾಗಿ ಕೇಂದ್ರದಿಂದ ₹17,901.73 ಕೋಟಿ ನೆರವು ಕೋರಲು ತೀರ್ಮಾನಿಸಲಾಗಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.
ಸಚಿವ ಸಂಪುಟ ಸಭೆಯ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಒಟ್ಟು ₹33,770.10 ಕೋಟಿ ಮೌಲ್ಯದ ಬೆಳೆ ಹಾನಿಯಾಗಿದೆ. ಕೇಂದ್ರ ಸಚಿವರನ್ನು ಭೇಟಿ ಮಾಡಿ ರಾಜ್ಯದ ಸ್ಥಿತಿ ವಿವರಿಸಲು ಸಮಯ ಕೇಳುತ್ತಿದ್ದೇವೆ. ಈವರೆಗೆ ಸಮಯ ನೀಡಿಲ್ಲ. ಈ ಬಗ್ಗೆ ಸಭೆಯಲ್ಲಿ ಕಳವಳ ವ್ಯಕ್ತವಾಯಿತು ಎಂದರು.
195 ತಾಲ್ಲೂಕುಗಳಲ್ಲದೇ ಹೆಚ್ಚುವರಿಯಾಗಿ 21 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲು ಸಂಪುಟ ಒಪ್ಪಿಗೆ ನೀಡಿತು ಎಂದರು.
ರಸಗೊಬ್ಬರ ಬಫರ್ ಸ್ಟಾಕ್ ದಾಸ್ತಾನು ಮಾಡಲು ಕರ್ನಾಟಕ ಸಹಕಾರ ಮಾರಾಟ ಮಂಡಳಿಗೆ ₹200 ಕೋಟಿ ಮತ್ತು ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತಕ್ಕೆ ₹200 ಕೋಟಿ ಸಾಲದ ಮೊತ್ತಕ್ಕೆ ಗ್ಯಾರಂಟಿ ನೀಡಲು ಸಂಪುಟ ಒಪ್ಪಿಗೆ ನೀಡಿತು.
ಸಚಿವರ ವೇತನ ಹೆಚ್ಚಿಸುವ ಸಂಬಂಧ ಘಟನೋತ್ತರ ಮಂಜೂರಾತಿ ನೀಡಲಾಯಿತು. ಕಳೆದ ಅಧಿವೇಶನದಲ್ಲಿ ವೇತನ ಹೆಚ್ಚಳ ಸಂಬಂಧ ಮಸೂದೆಗೆ ಅಂಗೀಕಾರ ನೀಡಲಾಗಿತ್ತು ಎಂದು ಪಾಟೀಲ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.