ಕಲಬುರ್ಗಿ: ‘ನಗರಕ್ಕೆ ಬೆಳಗಿನ ಜಾವ ಬಂದಿದ್ದೇನೆ. ಇಷ್ಟೊಂದು ಜನ ಅಭಿಮಾನಿಗಳು ಸ್ವಾಗತ ಕೋರುತ್ತಿರುವುದು ತುಂಬಾ ಖುಷಿ ಆಗಿದೆ. ಮೂರು ದಿನಗಳ ಕಾಲ ನಿಮ್ಮ ಜೊತೆ ಕಾಲ ಕಳೆಯುತ್ತೇನೆ’ ಎಂದು ಸಮ್ಮೇಳನಾಧ್ಯಕ್ಷ ಎಚ್.ಎಸ್. ವೆಂಕಟೇಶಮೂರ್ತಿ ಹೇಳಿದರು.
ರೈಲು ನಿಲ್ದಾಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಮ್ಮೇಳನ ಅರ್ಥಪೂರ್ಣವಾಗಿ ನಡೆಯುತ್ತದೆ. ಸಾಹಿತ್ಯಾಸಕ್ತರು ಕುಟುಂಬದೊಂದಿಗೆ ಬನ್ನಿ, ಮಕ್ಕಳನ್ನು ಕರೆತನ್ನಿ’ ಎಂದು ಮನವಿ ಮಾಡಿದರು.
ಸಮ್ಮೇಳನದ ನಿರ್ಣಯಗಳು ಕಾಗದಕ್ಕೆ ಸೀಮಿತವಾದ ಕುರಿತು ಪ್ರತಿಕ್ರಿಯಿಸಿ, ‘ಇವಾಗಲೇ ನಕಾರಾತ್ಮಕವಾಗಿ ಯೋಚನೆ ಮಾಡುವುದು ಬೇಡ. ಮಗು ಅಳದೆ ಇದ್ದರೆ ತಾಯಿ ಹಾಲು ಕೊಡುವುದಿಲ್ಲ. ನಾವು ಹೋರಾಟ ಮಾಡಬೇಕು, ಸರ್ಕಾರದ ಕಣ್ಣು ತೆರೆಸಬೇಕು. ಇಂದಲ್ಲ ನಾಳೆ ನಿರ್ಣಯಗಳು ಜಾರಿಗೆ ಬಂದೆ ಬರುತ್ತವೆ’ ಎಂದರು.