ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಸೋಮವಾರ ಉತ್ತಮ ಮಳೆಯಾಗಿದೆ. ಕೆಲವು ಪ್ರದೇಶದಲ್ಲಿ ಕಟಾವಿಗೆ ಬಂದ ಬೆಳೆಗೆ ಹಾನಿಯಾಗಿದೆ.
ಬಳ್ಳಾರಿಯ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಕರಡಿಹಳ್ಳಿಯಲ್ಲಿಭಾನುವಾರ ತಡರಾತ್ರಿ ಸುರಿದ ಆಲಿಕಲ್ಲು ಮಳೆಗೆ 12 ಕುರಿಗಳು ಸತ್ತಿದ್ದು, 10ಕ್ಕೂ ಹೆಚ್ಚು ಕಡೆ ವೀಳ್ಯದೆಲೆ ಹಾಗೂಬಾಳೆ ತೋಟಗಳು ಹಾಳಾಗಿವೆ.ಹೂವಿನಹಡಗಲಿ ತಾಲ್ಲೂಕಿನಲ್ಲಿ ಕಟಾವಿಗೆ ಬಂದಿದ್ದ ನೂರಾರು ಎಕರೆ ಭತ್ತ ಹಾಗೂ ಬಾಳೆ ಬೆಳೆ ನೆಲಕಚ್ಚಿವೆ. ಸಂಡೂರು ತಾಲ್ಲೂಕಿನಲ್ಲಿ ಆರು ಮನೆಗಳು ಜಖಂಗೊಂಡಿವೆ.
ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ಸುತ್ತಮುತ್ತ ಸೋಮವಾರ ಗುಡುಗು ಸಹಿತ ಮಳೆಯಾಗಿದ್ದು, ಕಟಾವಿಗೆ ಬಂದಿದ್ದ ಗೋವಿನಜೋಳಕ್ಕೆ ಹಾನಿಯಾಗಿದೆ. ಶಿರಸಿ ತಾಲ್ಲೂಕಿನ ಬದನಗೋಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದಾಸನಕೊಪ್ಪ, ಸುತ್ತಲಿನ ಹಳ್ಳಿಗಳಲ್ಲಿ ಬಿರುಸಿನ ಮಳೆ ಸುರಿದಿದೆ.
ಬೆಳಗಾವಿ ಜಿಲ್ಲೆಯ ಕೆಲವೆಡೆ ಸೋಮವಾರ ತುಂತುರು ಮಳೆಯಾಗಿದೆ. ಹಾವೇರಿ ಜಿಲ್ಲೆಯ ಶಿಗ್ಗಾವಿ, ರಾಣೆಬೆನ್ನೂರು, ಅಕ್ಕಿ ಆಲೂರು, ಹಾನಗಲ್ನಲ್ಲಿ ಮಳೆಯಾಗಿದೆ. ಗದಗದ ಮುಳಗುಂದದಲ್ಲೂ ಮಳೆಯಾಗಿದೆ.
ಬಿರುಸಿನ ಮಳೆ: ಕೊಡಗು ಜಿಲ್ಲೆಯ ವಿರಾಜಪೇಟೆ, ಮಾಯಮುಡಿ, ಗೋಣಿಕೊಪ್ಪಲು, ರುದ್ರಬೀಡು, ತಿತಿಮತಿ, ಸಿದ್ದಾಪುರ, ಮಗ್ಗುಲ, ನೆಲ್ಯಹುದಿಕೇರಿ ಭಾಗದಲ್ಲಿ ಉತ್ತಮ ಮಳೆಯಾಗಿದೆ. ನಾಪೋಕ್ಲು ಭಾಗದಲ್ಲಿ ಸಂಜೆ ಅರ್ಧ ಗಂಟೆಗೂ ಹೆಚ್ಚು ಸಮಯ ಬಿರುಸಿನ ಮಳೆ ಸುರಿದು ತಂಪೆರೆಯಿತು.
ಮೈಸೂರು ಸೇರಿದಂತೆ ಜಿಲ್ಲೆಯ ಹಲವೆಡೆ ಭಾನುವಾರ ತಡರಾತ್ರಿ ಗುಡುಗು ಸಹಿತ ಬಿರುಸಿನ ಮಳೆಯಾಗಿದೆ.
ಸಾಧಾರಣ ಮಳೆ:ಚಿಕ್ಕಮಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸಾಧಾರಣ ಮಳೆಯಾಗಿ,ಇಳೆಗೆ ತಂಪೆರೆ ಯಿತು. ಬೀದರ್ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಭಾನುವಾರ ತಡರಾತ್ರಿ ಮಳೆ ಸುರಿದಿದೆ.