ಬೆಂಗಳೂರು: ನಗರದ ಕೆನರಾ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ಇತ್ತೀಚೆಗೆ ‘ಹಿಂದಿ ದಿನ’ ಆಚರಿಸಲಾಯಿತು.
ಬ್ಯಾಂಕ್ ಸಿಬ್ಬಂದಿ ಸರಳ ಹಾಗೂ ಸುಲಭವಾಗಿ ಹಿಂದಿ ಭಾಷೆ ಬಳಸಲು ಅನುಕೂಲವಾಗುವ ನಿಟ್ಟಿನಲ್ಲಿ ‘ಲೆಟ್ಸ್ ಲರ್ನ್ ಹಿಂದಿ’ ಸಿ.ಡಿಯನ್ನು ಅಧಿಕೃತ ಭಾಷಾ ಇಲಾಖೆಯ ಉಪನಿರ್ದೇಶಕ ಕೆ.ಪಿ.ಶರ್ಮಾ ಹಾಗೂ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಆರ್.ಎ.ಶಂಕರನಾರಾಯಣ ಬಿಡುಗಡೆಗೊಳಿಸಿದರು.
ಶರ್ಮಾ,‘ಹಿಂದಿ ಭಾಷೆಯ ಪ್ರಚಾರದಲ್ಲಿ ದಕ್ಷಿಣ ಭಾರತೀಯರ ಕೊಡುಗೆ ಹಾಗೂ ತ್ಯಾಗ ಅಭೂತಪೂರ್ವ. ವಿಜ್ಞಾನ, ಔಷಧಿ, ತಂತ್ರಜ್ಞಾದಲ್ಲಿ ದೇಶ ಸಾಕಷ್ಟು ಮುನ್ನಡೆ ಸಾಧಿಸಿರುವಾಗ ನಾವು ನಮ್ಮ ಸ್ಥಳೀಯ ಭಾಷೆಗಳ ಅಭಿವೃದ್ಧಿಗೆ ಒತ್ತು ನೀಡಬೇಕು’ ಎಂದರು.
‘ಬ್ಯಾಂಕ್ ಒಂದು ಸೇವಾ ವಲಯ. ಭಾಷಾ ಬಳಕೆಯಿಂದ ಗ್ರಾಹಕರ ಅಗತ್ಯಗಳನ್ನು ಪೂರೈಸಬೇಕು. ಆಗಲೇ ಬ್ಯಾಂಕ್ ಬೆಳೆಯಲು ಸಾಧ್ಯ. ಬ್ಯಾಂಕಿಂಗ್ ವಲಯದಲ್ಲಿ ಹಿಂದಿಯನ್ನು ವ್ಯವಹಾರದ ಭಾಷೆಯನ್ನಾಗಿ ಬಳಸುವ ಮೂಲಕ ಬ್ಯಾಂಕ್ ಅನ್ನು ಅಭಿವೃದ್ಧಿಪಡಿಸಬೇಕು’ ಎಂದು ಆರ್.ಎ.ಶಂಕರನಾರಾಯಣ ತಿಳಿಸಿದರು.
ಬ್ಯಾಂಕ್ ಸಿಬ್ಬಂದಿಗೆ ‘ಕೆನರಾ ಬ್ಯಾಂಕ್ ರಾಜ್ಭಾಷಾ ಅಕ್ಷಯ ಯೋಜನೆ’ ಹಾಗೂ ‘ರಾಜ್ಭಾಷಾ ಪುರಸ್ಕಾರ ಯೋಜನಾ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬ್ಯಾಂಕಿನ ಸಹಾಯಕ ಪ್ರಧಾನ ವ್ಯವಸ್ಥಾಪಕ ಎಚ್.ಎಂ.ಬಸವರಾಜ್, ಭಾಷಾ ವಿಭಾಗದ ಅಧಿಕಾರಿ ಅವನಿಕಾಂತ್ ಸಿಂಗ್ ಇದ್ದರು.