ಹೆಬ್ರಿ: ತಾಲ್ಲೂಕಿನ ಮುದ್ರಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಬ್ಬಿನಾಲೆ ಹೊನ್ನಕೊಪ್ಪಲದಲ್ಲಿ ಕಾಡು ಪ್ರಾಣಿ ಬರ್ಕವನ್ನು ಬೇಟೆಯಾಡಿ ಕಾರಿನಲ್ಲಿ ಸಾಗಣೆ ಮಾಡುತ್ತಿದ್ದ ಇಬ್ಬರನ್ನು ಹೆಬ್ರಿ ಮತ್ತು ಕಾರ್ಕಳ ವಲಯ ಅರಣ್ಯಾಧಿಕಾರಿಗಳ ತಂಡ ಬುಧವಾರ ಬಂಧಿಸಿದೆ.
ಬಂಟ್ವಾಳ ತಾಲ್ಲೂಕು ಈರಾ ಗ್ರಾಮದ ಮೋನುದ್ದೀನ್ ಕುಂಞ್ಞಿ, ವಿಟ್ಲ ಪಡೂರು ಗ್ರಾಮದ ಕುಕ್ಕಿಲ ಹೌಸ್ ಶಾಹುಲ್ ಹಮೀದ್ ಬಂಧಿತರು. ಬಂಟ್ವಾಳ ಅಬ್ದುಲ್ ಹಮೀದ್ ಯಾನೆ ಹಮೀದ್ ತಲವಾರ್ ಮತ್ತು ಕಬ್ಬಿನಾಲೆ ಜಡ್ಡು ಮನೆಯ ಸುಧಾಕರ ಮೇರ ಪರಾರಿಯಾಗಿದ್ದಾರೆ.
ಆರೋಪಿಗಳಿಂದ ಬೇಟೆಯಾಡಿದ ಪ್ರಾಣಿ, ಕೋವಿ, ಟಾರ್ಚ್ ಲೈಟ್, ಚೂರಿಗಳು, ಮಾರುತಿ ಕಾರು ವಶಪಡಿಸಿಕೊಳ್ಳಲಾಗಿದೆ.
ರೈತರಿಗೆ ಶೀಘ್ರ ಋಣಮುಕ್ತಿ ಪತ್ರ
ಮಂಗಳೂರು: ಸಹಕಾರಿ ಸಂಸ್ಥೆಗಳಲ್ಲಿ ಬೆಳೆ ಸಾಲ ಪಡೆದಿದ್ದು, ರಾಜ್ಯ ಸರ್ಕಾರದ ಸಾಲ ಮನ್ನಾ ಯೋಜನೆಯ ಫಲಾನುಭವಿಗಳಾಗಿರುವ 22 ಲಕ್ಷ ರೈತರಿಗೆ ಶೀಘ್ರದಲ್ಲಿ ಸಹಕಾರ ಇಲಾಖೆಯಿಂದ ಋಣಮುಕ್ತಿ ಪತ್ರ ವಿತರಿಸಲಾಗುವುದು ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ತಿಳಿಸಿದರು.
ಇಲ್ಲಿನ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ (ಎಸ್ಸಿಡಿಸಿಸಿ) ಬ್ಯಾಂಕ್ನಲ್ಲಿ ಬುಧವಾರ ಸಹಕಾರ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾಲ ಮನ್ನಾ ಫಲಾನುಭವಿಗಳಿಂದ ಮಾಹಿತಿ ಪಡೆಯಲಾಗಿದೆ. ಈಗ ಇಲಾಖೆಯಿಂದ ಋಣಮುಕ್ತಿ ಪತ್ರ ವಿತರಿಸಲಾಗುವುದು. ಅದನ್ನು ಸಲ್ಲಿಸಿದರೆ ಅವರಿಗೆ ಮನ್ನಾ ಆಗಿರುವ ಮೊತ್ತದಷ್ಟು ಹೊಸ ಸಾಲ ಮಂಜೂರು ಮಾಡಲಾಗುತ್ತದೆ’ ಎಂದರು.
ಈ ವರ್ಷ ಸಹಕಾರಿ ಸಂಸ್ಥೆಗಳಲ್ಲಿನ ₹ 9 ಸಾವಿರ ಕೋಟಿಯಷ್ಟು ಬೆಳೆ ಸಾಲ ಮನ್ನಾ ಆಗಲಿದೆ. ಸ್ವಯಂಘೋಷಿತ ಹೇಳಿಕೆ ಇರುವ ಸರಳವಾದ ಅರ್ಜಿ ನಮೂನೆಯಲ್ಲಿ ರೈತರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಾಡಿರುವ ಘೋಷಣೆಯಂತೆ ತಿಂಗಳೊಳಗೆ ಮೊದಲ ಕಂತಿನ ಹಣ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.