ಹುಬ್ಬಳ್ಳಿ: ‘ಕಾಂಗ್ರೆಸ್ ಘೋಷಿಸಿದ ಐದು ಗ್ಯಾರಂಟಿಗಳಲ್ಲಿ ಎರಡು ಅಥವಾ ಮೂರು ಗ್ಯಾರಂಟಿಗಳನ್ನು ಶೀಘ್ರ ಅನುಷ್ಠಾನಕ್ಕೆ ತಂದರೆ, ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಲಾಭವಾಗಲಿದೆ’ ಎಂದು ಕಾಂಗ್ರೆಸ್ ಮುಖಂಡ ಜಗದೀಶ ಶೆಟ್ಟರ್ ಅಭಿಪ್ರಾಯಪಟ್ಟರು.
ನಗರದ ಕೇಶ್ವಾಪುರ ಬಳಿಯ ರಾಯ್ಕರ್ ಅತಿಥಿಗೃಹದಲ್ಲಿ ‘ಹುಧಾ ಸೆಂಟ್ರಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿನ ಕುರಿತು ಮಂಗಳವಾರ ಹಮ್ಮಿಕೊಂಡಿದ್ದ ‘ಆತ್ಮಾವಲೋಕನ ಸಭೆ’ಯಲ್ಲಿ ಅವರು ಮಾತನಾಡಿದರು.
‘ಚುನಾವಣಾ ಪೂರ್ವ ಗ್ಯಾರಂಟಿ ಮೂಲಕ ಭರವಸೆ ನೀಡಿರುವ ದೇಶದ ಐಕೈಕ ಪಕ್ಷ ಕಾಂಗ್ರೆಸ್. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವುಗಳ ಅನುಷ್ಠಾನಕ್ಕೆ ಆರ್ಥಿಕ ಇಲಾಖೆ ಜೊತೆ ಚರ್ಚೆ ನಡೆಸಿದ್ದಾರೆ. ಬಜೆಟ್ ಹೊಂದಾಣಿಕೆ ಲೆಕ್ಕಾಚಾರ ನಡೆಯುತ್ತಿದ್ದು, ಶೀಘ್ರ ಭರವಸೆಗಳು ಈಡೇರಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಹು-ಧಾ ಸೆಂಟ್ರಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋತರೂ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ದೆಲ್ಲಿಯಲ್ಲಿದ್ದ ಬಿಜೆಪಿ ವರಿಷ್ಠರು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಚುನಾವಣೆಯಲ್ಲಿ ಸೋತ ಬಳಿಕ ಶೆಟ್ಟರ್ ಖಿನ್ನತೆಗೆ ಒಳಗಾಗುತ್ತಾರೆ, ಹೊರಗಡೆ ಬರುವುದಿಲ್ಲ ಎಂದು ಬಿಜೆಪಿಯ ಕೆಲವು ಮುಖಂಡರು ಭಾವಿಸಿದ್ದರು. ಆದರೆ, ಇದೀಗ ನಾನೇ ಅವರನ್ನು ಖಿನ್ನತೆಗೆ ದೂಡಿದ್ದೇನೆ’ ಎಂದು ಹೇಳಿದರು.