ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಅಪರಾಧಗಳು ಹೆಚ್ಚಳ: ಖಡಕ್ ಸೂಚನೆ ನೀಡಿದ ಎಡಿಜಿಪಿ

Published 13 ಜುಲೈ 2023, 16:20 IST
Last Updated 13 ಜುಲೈ 2023, 16:20 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಕ್ರಮ ಕೈಗೊಳ್ಳಬೇಕು. ಯಾರಾದರೂ ಪದೇ ಪದೇ ಅಪರಾಧ ಎಸಗಿ ಸಾರ್ವಜನಿಕರಲ್ಲಿ ಭಯವನ್ನುಂಟು ಮಾಡಿದರೆ, ಅಂಥವರ ಹೆಸರನ್ನು ರೌಡಿ ಪಟ್ಟಿಗೆ ಸೇರಿಸಲು ಪ್ರಕ್ರಿಯೆ ಆರಂಭಿಸಬೇಕು’ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್‌. ಹಿತೇಂದ್ರ ಖಡಕ್ ಸೂಚನೆ ನೀಡಿದ್ದಾರೆ.

ರಾಜ್ಯದಲ್ಲಿ ಕೆಲದಿನಗಳಿಂದ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದ್ದು, ಪೊಲೀಸರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಇದೇ ಕಾರಣಕ್ಕೆ ರಾಜ್ಯದ ಎಲ್ಲ ಎಸ್ಪಿ ಹಾಗೂ ಕಮಿಷನರ್‌ಗಳಿಗೆ 21 ಪ್ರಮುಖ ಸೂಚನೆ ನೀಡಿರುವ ಹಿತೇಂದ್ರ, ‘ಹಲವು ಜಿಲ್ಲೆ ಹಾಗೂ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಸಭೆ ಮಾಡಿದ್ದೇನೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದಿದ್ದಾರೆ.

ಪ್ರಮುಖ ಸೂಚನೆಗಳು:

  1. ಕೆಲ ಜಿಲ್ಲೆಗಳಲ್ಲಿ ಕಾನ್‌ಸ್ಟೆಬಲ್ ಹಾಗೂ ಹೆಡ್‌ ಕಾನ್‌ಸ್ಟೆಬಲ್‌ಗಳಿಗೆ ಬಡ್ತಿ ನೀಡಿಲ್ಲ. ಅರ್ಹತೆ ಆಧಾರದಲ್ಲಿ ತ್ವರಿತವಾಗಿ ಬಡ್ತಿ ನೀಡಬೇಕು

  2. ಹಲವು ಜಿಲ್ಲೆಗಳ ಪೊಲೀಸರು ಬಾಕಿ ಉಳಿಸಿಕೊಂಡಿರುವ, ಪೊಲೀಸ್ ಧ್ವಜ ಸ್ಟಿಕ್ಕರ್ ಮಾರಾಟದ ಹಣವನ್ನು ತ್ವರಿತವಾಗಿ ಮುಖ್ಯ ಕಚೇರಿಗೆ ಪಾವತಿಸಬೇಕು

  3. ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿರುವ ಸಿ.ಸಿ.ಟಿ.ವಿ ಕ್ಯಾಮೆರಾಗಳಿಗೆ ಜಿಯೊ ಟ್ಯಾಗ್ ಅಳವಡಿಸಬೇಕು

  4. ಎಸಿಪಿ/ಡಿವೈಎಸ್ಪಿ, ಹೆಚ್ಚುವರಿ ಎಸ್ಪಿ/ಡಿಸಿಪಿ, ಎಸ್‌ಪಿ, ಕಮಿಷನರ್ ಹಾಗೂ ಐಜಿಪಿಗಳು, ಠಾಣೆ ಹಾಗೂ ಕಚೇರಿಗಳ ಪರಿಶೀಲನೆಯನ್ನು ನವೆಂಬರ್ ಒಳಗಾಗಿ ಪೂರ್ಣಗೊಳಿಸಬೇಕು

  5. ಒಂದೇ ಠಾಣೆಯಲ್ಲಿ 5 ವರ್ಷ ಸೇವೆ ಮೀರಿದ ಎಎಸ್‌ಐ, ಹೆಡ್‌ ಕಾನ್‌ಸ್ಟೆಬಲ್ ಹಾಗೂ ಕಾನ್‌ಸ್ಟೆಬಲ್‌ಗಳನ್ನು ವರ್ಗಾವಣೆ ಮಾಡಬೇಕು

  6. ಸಾಮಾಜಿಕ ಮಾಧ್ಯಮಗಳ ನಿರ್ವಹಣೆ ಘಟಕ ತೆರೆಯಬೇಕು. ಯಾರಾದರೂ ಪ್ರಚೋದನಾಕಾರಿ ಪೋಸ್ಟ್ ಪ್ರಕಟಿಸಿದರೆ, ಆಯಾ ಠಾಣೆಗಳಲ್ಲಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ತ್ವರಿತವಾಗಿ ಬಂಧಿಸಬೇಕು

  7. ಕಾರಾಗೃಹ ಹಾಗೂ ಉಪ ಕಾರಾಗೃಹಗಳಿಗೆ ಮೂರು ತಿಂಗಳಿಗೊಮ್ಮೆ ದಿಢೀರ್ ಭೇಟಿ ನೀಡಿ ಪರಿಶೀಲಿಸಬೇಕು

  8. ಇನ್‌ಸ್ಪೆಕ್ಟರ್, ಡಿವೈಎಸ್ಪಿ ಹಾಗೂ ಎಸ್ಪಿಗಳು ತಮ್ಮ ವ್ಯಾಪ್ತಿಯಲ್ಲಿ ಇ–ಬೀಟ್ ಲಾಗಿನ್ ಆಗಿ ಉಸ್ತುವಾರಿ ನೋಡಿಕೊಳ್ಳಬೇಕು

  9. ಎಸ್‌.ಸಿ, ಎಸ್‌.ಟಿ ದೌರ್ಜನ್ಯ ತಡೆ ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆ ಪ್ರಕರಣಗಳಲ್ಲಿ 60 ದಿನದೊಳಗೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಬೇಕು. ನಿಗದಿತ ಅವಧಿಯೊಳಗೆ ಪಟ್ಟಿ ಸಲ್ಲಿಸದಿದ್ದರಿಂದ, ಅಂಥ ಅಧಿಕಾರಿ ವಿರುದ್ಧ ಕ್ರಮ ಜರುಗಿಸಲು ಎಸ್ಪಿ ಹಾಗೂ ಕಮಿಷನರ್‌ಗಳು ವರದಿ ಸಲ್ಲಿಸಬೇಕು

  10. ಸರ್ಕಾರಿ ಆಸ್ಪತ್ರೆಗಳಲ್ಲಿ ಯಾರಾದರೂ ಬಾಲಕಿ ಹೆರಿಗೆಯಾದರೆ, ಪೋಕ್ಸೊ ಪ್ರಕರಣ ದಾಖಲಿಸಿಕೊಂಡು ಪತಿ ಹಾಗೂ ಇತರರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು

  11. ಪ್ರತಿ ಜಿಲ್ಲೆಯಲ್ಲಿ ಅಪರಾಧ ಹಿನ್ನೆಲೆಯುಳ್ಳವರನ್ನು ಗುರುತಿಸಿ, ಅವರ ಫೋಟೊ ಸಮೇತ ಠಾಣೆಗಳಲ್ಲಿ ವಿವರ ಪ್ರಕಟಿಸಬೇಕು

  12. ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ. ಅತೀ ವೇಗ, ನಿಗದಿಗಿಂತ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯುವ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಬೇಕು. ಡ್ರಿಂಕ್ ಆ್ಯಂಡ್ ಡ್ರೈವ್ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು

  13. ಪೊಲೀಸರ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲು ದಕ್ಷಿಣ ವಲಯದಲ್ಲಿ ರೂಪಿಸಿರುವ ವ್ಯವಸ್ಥೆ ಉತ್ತಮವಾಗಿದೆ. ಎಲ್ಲ ಜಿಲ್ಲೆ ಹಾಗೂ ಕಮಿಷನರೇಟ್ ವ್ಯಾಪ್ತಿಯಲ್ಲಿ ಈ ವ್ಯವಸ್ಥೆ ಜಾರಿಗೆ ತರಬೇಕು

  14. ಸಿಬ್ಬಂದಿಗಳ ವಾರ್ಷಿಕ ಆರೋಗ್ಯ ತಪಾಸಣೆ ಶಿಬಿರಗಳನ್ನು ನಿಗದಿತ ದಿನದೊಳಗೆ ಕಡ್ಡಾಯವಾಗಿ ನಡೆಸಬೇಕು

  15. ಸೈಬರ್ ಅಪರಾಧ ಪ್ರಕರಣಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಇದರಿಂದಾಗಿ ಬಾಕಿ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಗಮನ ಹರಿಸಬೇಕು

  16. ಆರೋಪಿಗಳಿಂದ ಜಪ್ತಿ ಮಾಡಲಾದ ವಸ್ತುಗಳನ್ನು ನ್ಯಾಯಾಲಯದ ನಿರ್ದೇಶನಕ್ಕೆ ಅನುಗುಣವಾಗಿ ಸಂತ್ರಸ್ತರಿಗೆ ವಿತರಿಸಲು ಪ್ರತಿ ಮೂರು ತಿಂಗಳಿಗೊಮ್ಮೆ ವಿಶೇಷ ಪರೇಡ್ ಹಮ್ಮಿಕೊಳ್ಳಬೇಕು

  17. ರೌಡಿ ಪಟ್ಟಿಗೆ ಹೆಸರು ಸೇರಿಸಿದ ಬಳಿಕ 10 ವರ್ಷ ಅವಧಿಯಲ್ಲಿ ಅಪರಾಧ ಕೃತ್ಯ ಎಸಗದ ವ್ಯಕ್ತಿಯನ್ನು ಪಟ್ಟಿಯಿಂದ ತೆಗೆಯಬೇಕು. ಇದಕ್ಕಾಗಿ ಪ್ರಧಾನ ಕಚೇರಿ ಸೂಚನೆಗಳನ್ವಯ ವಿಶೇಷ ಅಭಿಯಾನ ನಡೆಸಬೇಕು

  18. ಪ್ರತಿ ಜಿಲ್ಲೆ ಹಾಗೂ ಕಮಿಷನರೇಟ್ ವ್ಯಾಪ್ತಿಯಲ್ಲಿ ಕೊಲೆ, ಕೊಲೆ ಯತ್ನ, ಸುಲಿಗೆ, ದರೋಡೆ ಪ್ರಕರಣದಲ್ಲಿ ಭಾಗಿಯಾಗಿರುವವರ ಪಟ್ಟಿ ಮಾಡಬೇಕು. ಇಂಥವರು ಪದೇ ಪದೇ ಅಪರಾಧಗಳಲ್ಲಿ ತೊಡಗಿದರೆ, ಅವರ ಹೆಸರನ್ನು ರೌಡಿ ಪಟ್ಟಿಗೆ ಸೇರಿಸಲು ಪ್ರಕ್ರಿಯೆ ಆರಂಭಿಸಬೇಕು

  19. ರೌಡಿ ಪಟ್ಟಿಯಲ್ಲಿ ಹೆಸರಿರುವವರು ಪದೇ ಪದೇ ಅಪರಾಧ ಕೃತ್ಯ ಎಸಗಿದರೆ, ಗೂಂಡಾ ಕಾಯ್ದೆಯಡಿ ಬಂಧಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT