ತುಮಕೂರು: ಕೇಂದ್ರ ಸರ್ಕಾರವು ಸತತ ಇಂಧನ ಬೆಲೆ ಏರಿಕೆ ಮಾಡಿಕೊಂಡು ಬಂದಿದ್ದು, ಸಾರಿಗೆ ಬಸ್ ಪ್ರಯಾಣ ದರ ಹೆಚ್ಚಳ ಅನಿವಾರ್ಯ ಎಂದು ಉಪ ಮುಖ್ಯಮಂತ್ರಿ ಡಾ.ಪರಮೇಶ್ವರ ಹೇಳಿದರು.
ತುಮಕೂರಿನಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು. ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ 16 ಬಾರಿ ಇಂಧನ ಬೆಲೆ ಹೆಚ್ಚಳ ಮಾಡಿದ್ದಾರೆ. ಸತತ ಬೆಲೆ ಏರಿಕೆಯಿಂದ ಸಾರಿಗೆ ಬಸ್ ಪ್ರಯಾಣ ದರ ಹೆಚ್ಚಳ ಮಾಡಬೇಕಾಗುತ್ತದೆ. ಇಲ್ಲದೇ ಇದ್ದರೆ ಸಂಸ್ಥೆ ನಷ್ಟಕ್ಕೆ ಗುರಿಯಾಗಬೇಕಾಗುತ್ತದೆ ಎಂದರು.
ಗೌರಿ ಲಂಕೇಶ್ ಹತ್ಯೆ ಪ್ರಕರಣ ತನಿಖಾ ತಂಡ ಚುರುಕಿನ ತನಿಖೆ ನಡೆಸುತ್ತಿದ್ದಾರೆ. ಆ ಬಗ್ಗೆ ವರದಿ ಕೊಟ್ಟ ಬಳಿಕಷ್ಟೇ ಪ್ರಕರಣ ಕುರಿತು ವಿವರ ನೀಡಬಹುದು ಎಂದರು.
ತುಮಕೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಾಗಿ ಅಧಿಕಾರ ನಡೆಸಲಿವೆ.
10+10 = 20 ಆಗಲೂ ಸಾಧ್ಯವಿಲ್ಲ ಎಂದು ಬಿಜೆಪಿ ಶಾಸಕ ಜ್ಯೋತಿ ಗಣೇಶ್ ಅವರಿಗೆ ಅನುಭವ ಕಡಿಮೆ. 10+10 =20 ಆಗಲೇಬೇಕು. 25 ಆಗಲು ಸಾಧ್ಯವಿಲ್ಲ. ತಲಾ 10 ಸ್ಥಾನ ಗಳಿಸಿರುವ ಜೆಡಿಎಸ್, ಕಾಂಗ್ರೆಸ್ ಅಧಿಕಾರ ನಡೆಸಲಿವೆ ಎಂದರು.
ಕೊರಟಗೆರೆಯಲ್ಲಿ ಜೆಡಿಎಸ್ ಗೆ ಹೆಚ್ಚಿನ ಸ್ಥಾನಗಳು ಲಭಿಸಿರುವುದು ಜನರ ತೀರ್ಮಾನ. ಅದನ್ನು ಗೌರವಿಸುತ್ತೇವೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಸಂಘಟಿತ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.