ಬೆಂಗಳೂರು:ಹಿರಿಯ ಕಾಂಗ್ರೆಸಿಗ, ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಷರೀಫ್(85) ಅವರ ಅಂತ್ಯಕ್ರಿಯೆ ಸೋಮವಾರ ಜಯಮಹಲ್ ಖುದ್ದುಸ್ ಸಾಹೆಬ್ನಲ್ಲಿ ನಡೆಯಿತು.
ಮುಸ್ಲಿಂ ಸಮಾಜದ ಮುಖಂಡರು ಸೇರಿದಂತೆ ವಿವಿಧ ರಾಜಕೀಯ ಮುಖಂಡರು ಷರೀಫ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ಜಾಫರ್ ಷರೀಫ್ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರ ಹಾಗೂ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿತ್ತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇತರರು ಅಂತಿಮದರ್ಶನ ಪಡೆದರು.
ಬಳಿಕ, ಮೆರವಣಿಗೆಯಲ್ಲಿ ಕೊಂಡೊಯ್ಯುದು,ವಿಧಿ ವಿಧಾನಗಳನ್ನು ಪೂರೈಸಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಜಾಫರ್ ಷರೀಪ್ ಅವರು ಅನಾರೋಗ್ಯದಿಂದ ಭಾನುವಾರ ನಿಧನರಾಗಿದ್ದರು. ಅವರು 1933ರ ನವೆಂಬರ್ 3ರಂದು ಜನಿಸಿದ್ದರು.
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಭಾನುವಾರ ನಿಧನರಾದ ಕೇಂದ್ರದ ಮಾಜಿ ಸಚಿವ ಜಾಫರ್ ಷರೀಫ್ ಅವರ ಅಂತ್ಯಕ್ರಿಯೆ ಸ್ಥಳಕ್ಕೆ ಆಗಮಿಸಿ ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು. #JafferSharief pic.twitter.com/QdiAXRT8Yo
— CM of Karnataka (@CMofKarnataka) November 26, 2018
ಇದೇ 23ರ ಶುಕ್ರವಾರ ನಮಾಜ್ ಮಾಡುವ ಸಂದರ್ಭ ಅವರು ಹೃದಯಾಘಾತಕ್ಕೆ ಒಳಗಾಗಿ ಕುಸಿದುಬಿದ್ದರು. ಅವರನ್ನು ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ಮಧ್ಯಾಹ್ನ 12.30ಕ್ಕೆ ಅವರು ಕೊನೆಯುಸಿರೆಳೆದಿದ್ದರು.
‘ಮೂರು ವರ್ಷದ ಹಿಂದೆ ಅವರಿಗೆ ಬೈಪಾಸ್ ಸರ್ಜರಿ ಆಗಿತ್ತು. ಎರಡು ವರ್ಷಗಳಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಜಾಫರ್ಗೆ ಕಿಡ್ನಿ ವಿಫಲಗೊಂಡಿತ್ತು. ಮೂರು ದಿನದಿಂದ ಇಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಮಧ್ಯಾಹ್ನದ ಹೊತ್ತಿಗೆ ಹೃದಯಾಘಾತದಿಂದ ಅವರು ನಿಧನರಾಗಿದ್ದಾರೆ’ ಎಂದು ಫೋರ್ಟಿಸ್ ಆಸ್ಪತ್ರೆಯ ಡಾ. ಆರ್ ಕೇಶವ ಹೇಳಿದ್ದರು.
ಷರೀಫ್ ಅವರ ಪತ್ನಿ ಅಮೀನಬಿ ಮತ್ತು ಹಿರಿಯ ಪುತ್ರ ಅಬ್ದುಲ್ ಕರೀಮ್, ಕಿರಿಯ ಪುತ್ರ ಖಾದರ್ ನವಾಜ್ ಷರೀಫ್ ಈ ಹಿಂದೆಯೇ ನಿಧನರಾಗಿದ್ದಾರೆ. ಷರೀಫ್ ಅವರಿಗೆ ಇಬ್ಬರು ಪುತ್ರಿಯರಿದ್ದಾರೆ. ಇಬ್ಬರು ಮೊಮ್ಮಕ್ಕಳಿದ್ದಾರೆ.
* ಇವನ್ನೂ ಓದಿ...
* ಚಿತ್ರದುರ್ಗದ ಚಿಕ್ಕ ಮೂರ್ತಿಯ ದೊಡ್ಡ ಕೀರ್ತಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.