ಬೆಂಗಳೂರು: ರಾಜ್ಯದ ಆಡಳಿತದ ಶಕ್ತಿಕೇಂದ್ರ ಶುಕ್ರವಾರ ಜನರ ಸಮಸ್ಯೆಗಳನ್ನು ಆಲಿಸುವ ತಾಣವಾಗಿ ಬದಲಾಗಿತ್ತು. ಸಮಸ್ಯೆಗಳನ್ನು ಹೊತ್ತು ಬಸವಳಿದಿದ್ದ ಸಾವಿರಾರು ಜನರು ಅಲ್ಲಿಗೆ ದೌಡಾಯಿಸಿದ್ದರು. ಹಿರಿಯ ನಾಗರಿಕರು, ಅಂಗವಿಕಲರು, ಮಹಿಳೆಯರು, ಆರೋಗ್ಯ ಸಮಸ್ಯೆ ಹೊತ್ತು ಬಂದವರು ತಮ್ಮ ದೂರು ದುಮ್ಮಾನಗಳನ್ನು ಹೇಳಿಕೊಂಡರು. ಕೆಲವರು ಸ್ಥಳದಲ್ಲೇ ಪರಿಹಾರ ಪಡೆದು ಮರಳಿದರು.
ವಿಧಾನಸೌಧದ ಆವರಣದಲ್ಲಿ ಇದೇ ಮೊದಲ ಬಾರಿ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮಕ್ಕೆ 20 ಸಾವಿರಕ್ಕೂ ಹೆಚ್ಚು ಜನರು ಬಂದಿದ್ದರು. ಕೆಲವರು ರಾತ್ರಿಯಿಂದಲೇ ವಿಧಾನಸೌಧದ ಬಳಿ ಜಮಾಯಿಸಿದ್ದರು. ಬೆಳಿಗ್ಗೆ 8.30ರಿಂದ ನೋಂದಣಿ ಆರಂಭವಾಯಿತು. ಸುಮಾರು ಎಂಟು ಗಂಟೆಗೆ ಜನಸ್ಪಂದನದ ಸ್ಥಳಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಲ್ಲರ ಸಮಸ್ಯೆಗಳಿಗೂ ಕಿವಿಯಾದರು. ಪರಿಹಾರ ಕೊಡಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಹಲವರ ಚಿಕಿತ್ಸೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹಲವರಿಗೆ ಒಟ್ಟು ₹10 ಲಕ್ಷ ನೆರವು ನೀಡಿದರು.
ಉದ್ಯೋಗ, ಆರ್ಥಿಕ ನೆರವು ಕೋರಿ ಬಂದಿದ್ದ ಅಂಗವಿಕಲರಿಗೆ ಆತ್ಮಸ್ಥೈರ್ಯ ತುಂಬಿದರು. ಸೂಕ್ತ ಸಹಕಾರ, ಅಗತ್ಯ ಸಹಾಯ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜನಸ್ಪಂದನದಲ್ಲಿ ಸಲ್ಲಿಕೆಯಾದ ಎಲ್ಲ 12,372 ಅರ್ಜಿಗಳನ್ನೂ ಒಂದು ತಿಂಗಳ ಒಳಗೆ ಇತ್ಯರ್ಥಪಡಿಸಲು, ಕೋರ್ಟ್, ಕಾನೂನು ವ್ಯಾಪ್ತಿಯ ಒಳಗಿಲ್ಲದ ಬೇಡಿಕೆಗಳಿಗೆ ಸೂಕ್ತ ಹಿಂಬರಹ ನೀಡುವಂತೆ ಅಧಿಕಾರಿಗಳಿಗೆ ಸಿದ್ದರಾಮಯ್ಯ ನಿರ್ದೇಶನ ನೀಡಿದರು.