ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರ ದೌರ್ಜನ್ಯ ಖಂಡಿಸಿ ‘ಜಸ್ಟೀಸ್‌ ಫಾರ್‌ ಅಶ್ರಫ್‌’ ಅಭಿಯಾನ

Last Updated 7 ಸೆಪ್ಟೆಂಬರ್ 2018, 6:39 IST
ಅಕ್ಷರ ಗಾತ್ರ

ಬೆಂಗಳೂರು:‘ಗೌರವದ ಬದುಕು ನಡೆಸಬೇಕು ಎಂಬ ನನ್ನ ಅಭಿಲಾಷೆ ಪೊಲೀಸರ ವರ್ತನೆಯಿಂದ ಮಣ್ಣುಪಾಲಾಗಿದೆ. ಬಟ್ಟೆ ಬಿಚ್ಚಿ ಬೆತ್ತಲೆಮಾಡಿ ಲಾಕಪ್‌ಗೆ ಹಾಕಿದರು. ವಾರಗಳ ಕಾಲ ಜೈಲಿಗೆ ಕಳುಹಿಸಿ ಕ್ರಿಮಿನಲ್ ಮಾಡಿಬಿಟ್ಟರು. ನನ್ನ ಕನಸು ನುಚ್ಚು ನೂರಾಯಿತು. ನನ್ನ ಬದುಕು ನಾಶವಾಯಿತು. ನಾನೀಗ ಕ್ರಿಮಿನಲ್’

–ಮೂಢನಂಬಿಕೆ ಹೇಳಿಕೆಯನ್ನು ಪ್ರಶ್ನಿಸಿದ್ದಕ್ಕಾಗಿಯೇ ಐದು ದಿನಗಳ ಸೆರೆವಾಸ ಅನುಭವಿಸಿದ ಬಂಟ್ವಾಳ ತಾಲ್ಲೂಕಿನ ಸಾಲೆತ್ತೂರಿನ ಅಶ್ರಫ್‌ ಅವರ ನೋವಿನ ಮಾತುಗಳಿವು. ಬಡ ಕುಟುಂಬದಿಂದ ಬಂದಿರುವ ಅಶ್ರಫ್‌, ಮಂಗಳೂರಿನ ಸೇಂಟ್‌ ಅಲೋಶಿಯಸ್‌ ಸಂಜೆ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ದರು. ಬಳಿಕ ದೂರ ಶಿಕ್ಷಣದಲ್ಲಿ ಬಿಎ ಪದವಿ, ರಾಜ್ಯಶಾಸ್ತ್ರದಲ್ಲಿ ಎಂ.ಎ ಪದವಿ ಪಡೆದಿದ್ದರು. ನಗರದ ಬಂದರು ಪ್ರದೇಶದಲ್ಲಿ ಬೇಕರಿಯೊಂದರಲ್ಲಿ ಸೇಲ್ಸ್‌ಮನ್ ಆಗಿ ಕೆಲಸ ಮಾಡುತ್ತಿದ್ದಾರೆ.

ಅಶ್ರಫ್‌ ಮಾತುಗಳನ್ನು ಕೇಳಿದ ಅನೇಕ ಮನಸ್ಸುಗಳು ಈಗ ಅವರ ಬೆಂಬಲಕ್ಕೆ ನಿಂತಿದ್ದು, ‘ಜಸ್ಟೀಸ್‌ ಫಾರ್‌ ಅಶ್ರಫ್‌’ ಎಂಬ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ಪ್ರಾರಂಭವಾಗಿರುವ ಈ ಅಭಿಯಾನ ಭಾರಿ ಸದ್ದು ಮಾಡುತ್ತಿದ್ದು, ಅಶ್ರಫ್‌ಗೆ ನ್ಯಾಯ ಸಿಗಬೇಕು ಎಂದು 17 ಮಂದಿ ಪೋಸ್ಟ್‌ಗಳನ್ನು ಹಾಕಿದ್ದಾರೆ. ಸುಮಾರು 50 ಮಂದಿ ಅವುಗಳಿಗೆ ಕಮೆಂಟ್‌ ಮಾಡಿದ್ದಾರೆ.‘ಪೊಲೀಸರು ಮನಸ್ಸಿಗೆ ಬಂದಂತೆ ನಡೆದುಕೊಂಡು ಜೈಲಿಗೆ ಹಾಕಿರುವುದಲ್ಲದೆ, ಜಾಮೀನು ಪಡೆದು ಹೊರಗೆ ಬಂದ ನಂತರವೂ ದೌರ್ಜನ್ಯ ಮುಂದುವರಿಸಿದ್ದಾರೆ’ ಎಂದು ಬಹಳಷ್ಟು ಮಂದಿ ಆರೋಪಿಸಿದ್ದಾರೆ.

‘ಭಕ್ತಪಡೆ ಎನ್ನುವುದು ಒಂದು ಪಟಾಲಂ ಮಾತ್ರ. ನಿಜವಾದ ಕಾರ್ಯಪಡೆ ವ್ಯವಸ್ಥೆಯ ಒಳಗಡೆಯೇ ಇದೆ. ಅದು ತನ್ನ ಒಡೆಯರಿಗೆ ನಿಷ್ಠವಾಗಿ ಕೆಲಸ ಮಾಡುತ್ತಲೇ ಇದೆ. ಅದರ ಒಂದು ಝಲಕ್ ಮಾತ್ರ ಅಶ್ರಫ್‌ ಸಾಲೆತ್ತೂರು ಪ್ರಕರಣ. ಯು.ಟಿ. ಖಾದರ್ ಅವರಂತಹ ಜಾತ್ಯಾತೀತ ನಾಯಕರು ಈಗಲೂ ನ್ಯಾಯದ ಕಡೆಗೆ ನಿಲ್ಲದಿದ್ದರೆ ಕಷ್ಟ ಇದೆ’ ಎಂದು ಸುನೈಫ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಅಶ್ರಪ್ ಹೇಳಿದ್ದರಲ್ಲಿ ಏನು ತಪ್ಪಿದೆಯೋ ತಿಳಿಯುತ್ತಿಲ್ಲ. ಮೂಢ ನಂಬಿಕೆಗಳನ್ನು ಪ್ರಶ್ನಿಸಬಾರದೇ?’ ಎಂದು ಲೇಖಕ ಪುರುಷೋತ್ತಮ ಬಿಳಿಮಲೆ ಪ್ರಶ್ನಿಸಿದ್ದಾರೆ.

‘ಅಶ್ರಫ್‌ ಮಾಡಿದ ತಪ್ಪೇನು? ಕೋಮುಗಲಭೆಗೆ ಕುಮ್ಮಕ್ಕು ಕೊಡುವ ನೂರಾರು ಫೇಸ್‌ಬುಕ್ ಖಾತೆಗಳ ಬಗ್ಗೆ ಮಾಹಿತಿ ನೀಡಿದರೂ ಕ್ರಮಕೈಗೊಳ್ಳದ ಮಂಗಳೂರಿನ ಪೊಲೀಸರೇ... ಅಶ್ರಫ್ ಎಂಬ ಮುಗ್ಧನ ಮೇಲೆ ಏಕೆ ಇಷ್ಟೊಂದು ಕಠಿಣ ಕ್ರಮ’ ಎಂದು ಅಬ್ದುಲ್‌ ಮುನೀರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಶ್ರಫ್‌ ಮಾಡಿದ್ದ ಫೋಸ್‌ ಏನು?

‘ಭಕ್ತರೊಬ್ಬರು ಹೇಳಿದ್ದು:– ಋತುಮತಿಯಾದ ಮಹಿಳೆಯರನ್ನು ಶಬರಿಮಲೆ ಪ್ರವೇಶಿಸಲು ಕೋರ್ಟು ಅವಕಾಶ ನೀಡಿದ್ದೇ ಕೇರಳದಲ್ಲಿ ನೆರೆ ಬರಲು ಕಾರಣ. ಅಶ್ರಫ್‌ ಸಾಲೆತ್ತೂರು ಕೇಳಿದ್ದು:– ಹಾಗಾದರೆ ಪರಶುರಾಮನ ಸೃಷ್ಟಿ ತುಳು ನಾಡಿನಲ್ಲಿ ನೆರೆ ಬರಲು ಕಾರಣವೇನು’ ಎಂದು ಪ್ರಶ್ನಿಸಿ ಅಶ್ರಫ್‌ ಆಗಸ್ಟ್‌ 19ರ ಸಂಜೆ ತನ್ನ ಫೇಸ್‌ ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದರು.

ಈ ಕುರಿತು ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಆ. 21ರಂದು ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲು ಮಾಡಲಾಗಿತ್ತು. ಈ ಪ್ರಕರಣದಲ್ಲಿ ಠಾಣೆಯ ಅಪರಾಧ ವಿಭಾಗದ ಸಬ್‌ ಇನ್‌ಸ್ಪೆಕ್ಟರ್ ಎಂ.ಸುಂದರ ಅವರೇ ದೂರುದಾರರು. ಬರಹದ ಮೂಲಕ ಶಾಂತಿ ಕದಡಲು ಮತ್ತು ಗಲಭೆ ಸೃಷ್ಟಿಸಲು ಯತ್ನ, ಕೋಮು ಗಲಭೆ ಸೃಷ್ಟಿಸಲು ಯತ್ನ ಮತ್ತು ಕ್ರಿಮಿನಲ್‌ ಮಧ್ಯಪ್ರವೇಶ ಮಾಡಿದ ಆರೋಪದಡಿ ಅಶ್ರಫ್‌ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT