'ಮತ ಹಾಕದಿದ್ದರೆ ನರೇಂದ್ರ ಮೋದಿ ಅವರ ಆಶೀರ್ವಾದ ಸಿಗವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಅಹಂಕಾರದ ಮಾತುಗಳನ್ನು ಆಡಿದ್ದಾರೆ. ಬಸವಣ್ಣ, ಕುವೆಂಪು ಅವರ ನಾಡಿದು. ಅವರ ಆಶೀರ್ವಾದವಿರುವಾಗ ಮೋದಿ ಅವರ ಆಶೀರ್ವಾದ ಬೇಕಿಲ್ಲ' ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದರು. ಮೈಸೂರು ಜಿಲ್ಲೆಗೆ ಇದೇ ಮೊದಲ ಬಾರಿ ಚುನಾವಣಾ ಪ್ರಚಾರಕ್ಕಾಗಿ ಬಂದಿದ್ದ ಅವರು, ತಿ.ನರಸೀಪುರ ತಾಲ್ಲೂಕಿನ ಹೆಳವನಹುಂಡಿ ಗ್ರಾಮದ ಹೊರವಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. 'ಬಿಜೆಪಿ ಸರ್ಕಾರವು ಒಂದೂವರೆ ಲಕ್ಷ ಕೋಟಿ ರೂಪಾಯಿ ಲೂಟಿ ಮಾಡಿದೆ. ಆ ಹಣದಲ್ಲಿ ಎರಡೂವರೆ ಸಾವಿರ ಕಿ.ಮೀ ರಸ್ತೆ ನಿರ್ಮಿಸಬಹುದಿತ್ತು. 750 ಕಿ.ಮೀ. ಮೆಟ್ರೊ ಮಾರ್ಗ ನಿರ್ಮಿಸಬಹುದಿತ್ತು. 30 ಲಕ್ಷ ಮನೆಗಳನ್ನು ಕಟ್ಟಬಹುದಿತ್ತು' ಎಂದೂ ಅವರು ಹೇಳಿದರು.