ಬೆಂಗಳೂರು: ಕೀಲು ನೋವಿನಿಂದ ಬಳಲುತ್ತಿದ್ದ ಕುಣಿಗಲ್ ತಾಲ್ಲೂಕಿನ ಕುಂದೂರು ಗ್ರಾಮದ ಮಹಿಳೆಯೊಬ್ಬರಿಗೆ ಕೀಲು ಮತ್ತು ಮೂಳೆ ರೋಗ ತಜ್ಞರೂ ಆಗಿರುವ ಕ್ಷೇತ್ರದ ಶಾಸಕ ಡಾ. ರಂಗನಾಥ್ ಅವರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಶಾಸಕರಾದವರು ಜನರ ಕಷ್ಟಕ್ಕೆ ನೆರವಾಗಬೇಕು. ಸೇವೆ, ಅಭಿವೃದ್ಧಿ ಕಾರ್ಯಗಳ ಮೂಲಕವೇ ನಾಯಕರನ್ನು ಜನ ಗುರುತಿಸಬೇಕು. ಕುಣಿಗಲ್ ಶಾಸಕರಾದ ಡಾ. ಎಚ್.ಡಿ. ರಂಗನಾಥ್ ಅವರು ಆರ್ಥಿಕ ತೊಂದರೆಯಲ್ಲಿದ್ದ ಬಡ ಮಹಿಳೆಗೆ ತಾವೇ ಖುದ್ದಾಗಿ ಶಸ್ತ್ರಚಿಕಿತ್ಸೆ ಮಾಡಿರುವುದು ನಿಜಕ್ಕೂ ಶ್ಲಾಘನೀಯ. ಇಂಥ ಸೇವೆಗಳೇ ಒಬ್ಬ ರಾಜಕಾರಣಿಗೆ ಆತ್ಮ ಸಂತೃಪ್ತಿ ತಂದುಕೊಡುವ ಸಂಗತಿಗಳು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.