ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಗೀತೆ ಧಾಟಿ ನಿರ್ಧಾರ: ಸರ್ಕಾರಕ್ಕಿರುವ ಶಾಸನಾತ್ಮಕ ಅಧಿಕಾರ ಏನು? ಹೈಕೋರ್ಟ್‌

Published 1 ಸೆಪ್ಟೆಂಬರ್ 2023, 13:37 IST
Last Updated 1 ಸೆಪ್ಟೆಂಬರ್ 2023, 13:37 IST
ಅಕ್ಷರ ಗಾತ್ರ

ಬೆಂಗಳೂರು: ಕಿಕ್ಕೇರಿ ಕೃಷ್ಣಮೂರ್ತಿ ತಮ್ಮ ಜಮೀನಿನಲ್ಲಿರುವ ಮರದ ಎತ್ತರದ ಟೊಂಗೆಯ ತುದಿಯಲ್ಲಿ ಕುಳಿತು ಜಯಭಾರತ ಜನನಿಯ ತನುಜಾತೆ... ನಾಡಗೀತೆಯನ್ನು ಜೌನ್‌ಪುರಿ ರಾಗದಲ್ಲಿ ಹಾಡುತ್ತೇನೆ ಎಂದು ಹೇಳಿದರೆ ಏನು ಮಾಡುವುದು? ಆಗ ಅದು ನಿಮ್ಮ ಆದೇಶಕ್ಕೆ ವಿರುದ್ಧವಾಗುತ್ತದೆಯೇ?

‘ದಿವಂಗತ ಮೈಸೂರು ಅನಂತಸ್ವಾಮಿ ಸಂಯೋಜಿಸಿದ ಧಾಟಿಯಲ್ಲಿಯೇ ನಾಡಗೀತೆಯನ್ನು 2 ನಿಮಿಷ 30 ಸೆಕೆಂಡ್‌ಗಳಲ್ಲಿ ಹಾಡಬೇಕು’ ಎಂಬುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ 2022ರ ಸೆಪ್ಟೆಂಬರ್‌ 25ರಂದು ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಸುಗಮ ಸಂಗೀತ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠವು ಶುಕ್ರವಾರ ವಿಚಾರಣೆ ನಡೆಸಿದ ವೇಳೆ ಕಿಕ್ಕೇರಿ ಪರ ವಕೀಲರನ್ನು ಪ್ರಶ್ನಿಸಿದ ಪರಿ ಇದು.

ಕಿಕ್ಕೇರಿ ಕೃಷ್ಣಮೂರ್ತಿ ಪರ ಹಿರಿಯ ವಕೀಲ ಅಶೋಕ ಹಾರನಹಳ್ಳಿ, ‘ಜನಸಾಮಾನ್ಯರು ಇಂಥದ್ದೇ ರಾಗದಲ್ಲಿ ಹಾಡಬೇಕು ಎಂಬ ಷರತ್ತು ಸರಿಯಲ್ಲ. ರಾಜ್ಯ ಸರ್ಕಾರ ನಮ್ಮ ಸಂಗೀತದ ಸ್ವಾತಂತ್ರ್ಯವನ್ನು ಕಸಿದುಕೊಂಡಿದೆ. ಹಾಗಾಗಿ, ಸರ್ಕಾರ ಇದರ ಔಚಿತ್ಯವನ್ನು ಮನವರಿಕೆ ಮಾಡಿಕೊಡಬೇಕು‘ ಎಂದು ಕೋರಿದರು.

ಇದಕ್ಕೆ ಉತ್ತರಿಸಿದ ರಾಜ್ಯ ಸರ್ಕಾರದ ಪರ ಹಾಜರಾಗಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಎಸ್‌.ಎ. ಅಹ್ಮದ್‌, ‘ಸರ್ಕಾರ ಈ ಆದೇಶವನ್ನು ಸಂವಿಧಾನದ 162ನೇ ವಿಧಿಯಡಿ ತನಗಿರುವ ಪರಮಾಧಿಕಾರವನ್ನು ಬಳಸಿ ಇಂತಹುದೇ ರಾಗದಲ್ಲಿ ಹಾಡುವಂತೆ ನಿರ್ಬಂಧ ವಿಧಿಸಿದೆ. ಇದನ್ನು ಸರ್ಕಾರದ ಅಧಿಕೃತ ಕಾರ್ಯಕ್ರಮಗಳು ಮತ್ತು ಸಾರ್ವಜನಿಕ ಸಮಾರಂಭಗಳಲ್ಲಿ ಮೈಸೂರು ಅನಂತಸ್ವಾಮಿ ಸಂಯೋಜಿಸದ ಧಾಟಿಯಲ್ಲೇ ಹಾಡುವಂತೆ ಆದೇಶಿಸಲಾಗಿದೆ‘ ಎಂದು ಸಮರ್ಥಿಸಿಕೊಂಡರು.

ಇದನ್ನು ಒಪ್ಪದ ನ್ಯಾಯಪೀಠ, ’ಈ ಪ್ರಕರಣದಲ್ಲಿ ಅರ್ಜಿದಾರರು ಎತ್ತಿರುವ ಪ್ರಶ್ನೆಯ ಅನುಸಾರ ಅವರ ತಮ್ಮ ಮನಸ್ಸಿಗೆ ಬಂದ ರಾಗದಲ್ಲಿ ಹಾಡಲು ನೀವೇಕೆ ನಿರ್ಬಂಧಿಸಿದ್ದೀರಿ ಎಂಬುದೇ ಆಗಿದೆ. ಅಂತೆಯೇ, ಸರ್ಕಾರ ಇಂತಹ ಆದೇಶ ಹೊರಡಿಸುವಾಗ ಅದಕ್ಕಿರುವ ಶಾಸನಾತ್ಮಕ ಅಧಿಕಾರಗಳೇನು ಮತ್ತು ಯಾರು, ಯಾವಾಗ ಎಂತಹ ಸಂದರ್ಭಗಳಲ್ಲಿ ನಿಮ್ಮ ಈ ನಿ‌ರ್ಬಂಧ ಪಾಲಿಸಬೇಕು ಎಂಬುದನ್ನು ನ್ಯಾಯಪೀಠಕ್ಕೆ ಖಚಿತವಾಗಿ ವಿವರಿಸಿ‘ ಎಂದು ನಿರ್ದೇಶಿಸಿತು.

ಇದೇ ವೇಳೆ ಮಧ್ಯಂತರ ಅರ್ಜಿದಾರ, ‘ಅಖಿಲ ಕರ್ನಾಟಕ ಸುಗಮ ಸಂಗೀತ ಸಂಸ್ಥೆಗಳ ಒಕ್ಕೂಟ‘ದ ಅಧ್ಯಕ್ಷ ಮೃತ್ಯುಂಜಯ ದೊಡ್ಡವಾಡ ಪರ ವಕೀಲರಾದ ಸಿ.ಎಚ್‌.ಹನುಮಂತರಾಯ ಅವರು, ‘ನಾಡಗೀತೆಗಳನ್ನು 1927ರಲ್ಲಿ ಅಸ್ಸಾಂ ರಾಜ್ಯದಲ್ಲಿ, 1956ರಲ್ಲಿ ಆಂಧ್ರಪ್ರದೇಶ, 2004ರಲ್ಲಿ ಕರ್ನಾಟಕ ನಂತರ ಏಳು ರಾಜ್ಯಗಳಲ್ಲಿ ಅಧಿಕೃತವಾಗಿ ಅಳವಡಿಸಿಕೊಳ್ಳಲಾಗಿದೆ. ಇನ್ನೈದು ರಾಜ್ಯಗಳಲ್ಲಿ ಅನಧಿಕೃತವಾಗಿ ಶಾಲಾ ಕಾಲೇಜು, ರಾಜ್ಯ ಸರ್ಕಾರ ಪ್ರಾಯೋಜಿತ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಾಡಗೀತೆಯನ್ನು ಹಾಡುವ ಪರಿಪಾಟ ಇದೆ‘ ಎಂದರು.

‘ಆದರೆ, ಯಾವ ರಾಜ್ಯದಲ್ಲೂ ನಾಡಗೀತೆಯನ್ನು ಇಂಥದ್ದೇ ಧಾಟಿಯಲ್ಲಿ ಹಾಡಬೇಕೆಂಬುದಕ್ಕೆ ಕೈಗೊಳ್ಳಲಾದ ನಿರ್ಣಯದ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಲಾಗಿಲ್ಲ. ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಇಂತಹುದೊಂದು ಸಂದಿಗ್ಧವನ್ನು ಹೊಂದಿದ ಪ್ರಕರಣ ಇದಾಗಿದೆ. ಆದ್ದರಿಂದ, ಇದಕ್ಕೆ ತುಂಬಾ ಮಹತ್ವವಿದೆ‘ ಎಂದು ವಿವರಿಸಿದರು. ಮಧ್ಯಂತರ ಅರ್ಜಿದಾರರ ಪರ ವಕೀಲ ಎಚ್‌.ಸುನಿಲ್‌ ಕುಮಾರ್‌ ವಕಾಲತ್ತು ವಹಿಸಿದ್ದಾರೆ.

ವಾದ–ಪ್ರತಿವಾದಿ ಆಲಿಸಿದ ನ್ಯಾಯಪೀಠ, ‘ಸರ್ಕಾರ ತಾನು ಯಾವುತ್ತು ಈ ಪ್ರಕರಣದಲ್ಲಿ ವಾದ ಮಂಡಿಸಲು ಸನ್ನದ್ಧ ಎಂಬುದನ್ನು ನ್ಯಾಯಪೀಠಕ್ಕೆ ಮುಂಚಿತವಾಗಿ ಮೆಮೊ ಸಲ್ಲಿಸಿದ ನಂತರ ವಿಚಾರಣೆ ಮುಂದುವರಿಸಲಾಗುವುದು‘ ಎಂದು ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT