ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳು ಹೇಳಿ ಮೋಸ ಮಾಡುವುದರಲ್ಲಿ ನಿಸ್ಸೀಮರು. ಅವರು ಯಾವತ್ತೂ ಅಸ್ಪೃಶ್ಯರಿಗೆ ನ್ಯಾಯ ಒದಗಿಸಲಿಲ್ಲ’ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಟೀಕಿಸಿದರು.
ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಂದೆ ಅಧಿಕಾರದಲ್ಲಿ ಇದ್ದಾಗಲೂ ಪರಿಶಿಷ್ಟರ ಬಗ್ಗೆ ಅವರು ಸ್ಪಂದನೆ ತೋರಿಸಲಿಲ್ಲ. ಎಸ್.ಸಿ ಒಳಮೀಸಲಾತಿಗಾಗಿ ಅಸ್ಪೃಶ್ಯ ಸಮಾಜದ ಕೆಲವು ಪಂಗಡದವರು 30 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದಾರೆ. 101 ಜಾತಿಗಳಿಗೆ ಅನ್ಯಾಯ ಆಗದಂತೆ ಇವರು ಒಳ ಮೀಸಲಾತಿ ನೀಡಬೇಕಿತ್ತಲ್ಲ’ ಎಂದರು.
ಲೋಕಸಭೆಯಲ್ಲಿ ಎಸ್ಸಿ ಸಮುದಾಯದ ಒಳಮೀಸಲಾತಿ ವಿಚಾರದಲ್ಲಿ ಕೇಂದ್ರ ಸಚಿವ ನಾರಾಯಣಸ್ವಾಮಿಯವರು, ಸಂವಿಧಾನದ ಪರಿಚ್ಛೇದ 341 ರ ಅಡಿಯಲ್ಲಿ ಯಾವುದೇ ಒಳಮೀಸಲಾತಿಗೆ ಸ್ಪಷ್ಟ ನಿರ್ದೇಶನ ಇಲ್ಲ ಎಂಬ ವಿಚಾರ ಪ್ರಸ್ತಾಪಿಸಿ ಪ್ರಶ್ನೆಗೆ ಸೀಮಿತವಾಗಿ ಉತ್ತರ ಕೊಟ್ಟಿದ್ದಾರೆ. ಆದರೆ, ಅದನ್ನು ಸಿದ್ದರಾಮಯ್ಯ ದುರುದ್ದೇಶದಿಂದ ಮತ್ತು ಎಸ್ಸಿ ಜನಾಂಗದ ಮಧ್ಯೆ ಗೊಂದಲ ಸೃಷ್ಟಿಸಲು ಕೇಂದ್ರ ಸರ್ಕಾರ ಹಾಗೂ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಗೂಬೆ ಕೂರಿಸುವ ಮಾತುಗಳನ್ನಾಡಿದ್ದಾರೆ ಎಂದು ಹರಿಹಾಯ್ದರು.
‘ನಮ್ಮ ಸರ್ಕಾರ ಇದ್ದಾಗ 101 ಜಾತಿಗಳಿಗೆ ಅನ್ಯಾಯ ಆಗದಂತೆ ಒಳಮೀಸಲಾತಿ ನೀಡುವ ಪ್ರಯತ್ನ ನಡೆಸಿದ್ದೆವು. ಆದರೆ, ಸ್ವಾತಂತ್ರ್ಯ ಬಂದಾಗಿನಿಂದ ಕಾಂಗ್ರೆಸ್ ಪರಿಶಿಷ್ಟರಿಗೆ ಮೋಸ ಮಾಡಿದೆ. ಬಿಜೆಪಿ ಮತ್ತು ಆರ್ಎಸ್ಎಸ್ ಸಾಮಾಜಿಕ ನ್ಯಾಯದ ಪರವಾಗಿದೆ’ ಎಂದು ಕಾರಜೋಳ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.