ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪೇಗೌಡರ ಪಾರಂಪರಿಕ ತಾಣ ಅಭಿವೃದ್ಧಿ

ಒಕ್ಕಲಿಗರು ಹೆಚ್ಚಿರುವ ಜಿಲ್ಲೆಗಳಲ್ಲಿ ಹಿಡಿತ ಸಾಧಿಸಲು ಬಿಜೆಪಿ ಯೋಜನೆ
Last Updated 12 ಜನವರಿ 2020, 20:24 IST
ಅಕ್ಷರ ಗಾತ್ರ

ಬೆಂಗಳೂರು: ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಬೆಂಗಳೂರು ಆಸುಪಾಸಿನ ಐದು ಜಿಲ್ಲೆಗಳಲ್ಲಿ ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಕೋಟೆ, ದೇವಸ್ಥಾನ, ಕೆರೆ ಮುಂತಾದ ತಾಣಗಳನ್ನು ಅಭಿವೃದ್ಧಿ ಪಡಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಸ್ಥಳಗಳನ್ನೇ ಮುಂದಿಟ್ಟುಕೊಂಡು ‘ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣಗಳ ತಿರುಗಾಟ’ದ ಹೆಸರಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ರೂಪರೇಷೆ ಸಿದ್ಧಪಡಿಸಿದೆ.

ಈ ಸಲುವಾಗಿ ಐದು ಜಿಲ್ಲೆಗಳಲ್ಲಿ ಕೆಂಪೇಗೌಡರ ಆಳ್ವಿಕೆಯ ಹೆಜ್ಜೆ ಗುರುತುಗಳಿರುವ 46 ತಾಣಗಳನ್ನು ಪಟ್ಟಿ ಮಾಡಿ ಮನ್ನಣೆ ನೀಡಲು ಸರ್ಕಾರ ಸಿದ್ಧತೆ ನಡೆಸಿದೆ. ಸರ್ಕಾರಕ್ಕೆ ಈ ಕುರಿತು ಸಲ್ಲಿಕೆಯಾಗಿರುವ ನೀಲನಕಾಶೆ ಪ್ರಕಾರ, ರಾಮನಗರ ಜಿಲ್ಲೆ ಈ ಇಡೀ ಯೋಜನೆಯಲ್ಲಿ ಪ್ರಾಮುಖ್ಯತೆ ಪಡೆಯಲಿದೆ. ಇಲ್ಲಿ ಒಟ್ಟು 20 ತಾಣಗಳನ್ನು ಈ ಯೋಜನೆಯೊಂದಿಗೆ ಜೋಡಿಸಲಾಗುತ್ತಿದೆ. ಬೆಂಗಳೂರು ನಗರ ಜಿಲ್ಲೆಯ 13, ತುಮಕೂರು ಜಿಲ್ಲೆಯ 6, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 5 ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ 2 ತಾಣಗಳನ್ನು ಈ ಸಲುವಾಗಿ ಗುರುತಿಸಲಾಗಿದೆ.

ಈ ಯೋಜನೆ ಬಗ್ಗೆ ಖಚಿತಪಡಿಸಿದ ಉಪಮುಖ್ಯಮಂತ್ರಿ ಸಿ.ಎನ್‌.ಅಶ್ವತ್ಥನಾರಾಯಣ, ‘ಮಾಹಿತಿ ತಂತ್ರಜ್ಞಾನದಲ್ಲಿ ಬೆಂಗಳೂರು ಜಗತ್ಪ್ರಸಿದ್ಧವಾಗಿದೆ. ಆದರೆ, ಈ ತಾಣಗಳ ಅಭಿವೃದ್ಧಿಯ ಮೂಲಕ ಬೆಂಗಳೂರು ಸಮೃದ್ಧ ಸಂಸ್ಕೃತಿ ಮತ್ತು ಇತಿಹಾಸವನ್ನು ಸಾರಿ ಹೇಳಲಿದೆ’ ಎಂದರು.

‘ಈ ತಾಣಗಳನ್ನು ಕಡೆಗಣಿಸಲಾಗಿತ್ತು. ಅವುಗಳ ನಿಜವಾದ ಮಹತ್ವವನ್ನು ಸಾರಲಿದ್ದೇವೆ. ಈ ತಾಣಗಳಿಗೆ ಉತ್ತಮ ಸಂಪರ್ಕ ಸೌಲಭ್ಯ ಕಲ್ಪಿಸುವುದು ಸದ್ಯದ ಸವಾಲು. ಪ್ರವಾಸೋದ್ಯಮ, ಸಂಸ್ಕೃತಿ, ಮುಜರಾಯಿ, ಪುರಾತತ್ವ, ಲೋಕೋಪಯೋಗಿ, ಸಣ್ಣ ನೀರಾವರಿ, ಮೂಲಸೌಕರ್ಯ ಮತ್ತು ಸಾರಿಗೆ ಇಲಾಖೆಗಳು ಈ ಯೋಜನೆಯ ಅನುಷ್ಠಾನಕ್ಕೆ ನೆರವಾಗಲಿವೆ. ಖಾಸಗಿ ಸಹಭಾಗಿತ್ವದ ಬಗ್ಗೆಯೂ ಸರ್ಕಾರ ಮುಕ್ತ ಚಿಂತನೆ ಹೊಂದಿದೆ’ ಎಂದರು.

‘ಈ ಯೋಜನೆಯಿಂದ ಪಕ್ಷಕ್ಕೆ ತಕ್ಷಣ ಯಾವುದೇ ಪ್ರಯೋಜನ ಇಲ್ಲದಿರಬಹುದು. ಈ ಕಾರ್ಯಕ್ರಮದ ಮೂಲಕ ಮೂಲಸೌಕರ್ಯ ಅಭಿವೃದ್ಧಿಪಡಿಸಿದರೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪ್ರಾಬಲ್ಯವಿರುವ ಈ ಪ್ರದೇಶಗಳಲ್ಲಿ ಕ್ರಮೇಣ ಹಿಡಿತ ಸಾಧಿಸಲು ಖಂಡಿತಾ ಸಾಧ್ಯವಾಗಲಿದೆ’ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ.

ಯಾವ ಪರಂಪರೆಗೆ ಎಷ್ಟು ಮಹತ್ವ?

ಧಾರ್ಮಿಕ ಪರಂಪರೆ; 54%

ನೈಸರ್ಗಿಕ ಪರಂಪರೆ; 18%

ಕಟ್ಟಡ ಪರಂಪರೆ; 17%

ಸ್ಮಾರಕ ಪರಂಪರೆ; 11%

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT