ತಿರುವನಂತಪುರ: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧದ ಪ್ರಾಣಿ ಬಲಿ ಆರೋಪವನ್ನು ಕೇರಳದ ಸಚಿವೆ ನಿರಾಕರಿಸಿದ್ದಾರೆ.
ತಮ್ಮ ಹಾಗೂ ಸಿಎಂ ಸಿದ್ದರಾಮಯ್ಯ ಮತ್ತು ಕರ್ನಾಟಕ ಸರ್ಕಾರದ ವಿರುದ್ಧ ಉತ್ತರ ಕೇರಳದ ದೇವಸ್ಥಾನದಲ್ಲಿ ಪ್ರಾಣಿ ಬಲಿ ನೀಡಲಾಗಿದೆ ಎಂಬ ಡಿಕೆಶಿ ಆರೋಪವನ್ನು ಕೇರಳದ ಉನ್ನತ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಚಿವೆ ಆರ್. ಬಿಂದು ಶುಕ್ರವಾರ ತಳ್ಳಿ ಹಾಕಿದ್ದಾರೆ.
ಇಂತಹ ಕೃತ್ಯಗಳು ಕೇರಳದಲ್ಲಿ ನಡೆಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ದೇಶದ ಇತರೆ ಭಾಗಗಳಲ್ಲಿ ಸಮಾಜವನ್ನು ಕರಾಳ ಯುಗಕ್ಕೆ ಎಳೆಯುವ ಪ್ರಯತ್ನಗಳು ನಡೆಯುತ್ತಿವೆ. ಹಾಗಿದ್ದರೂ, ಅಂಥ ಪ್ರಯತ್ನಗಳು ಕೇರಳದಲ್ಲಿ ನಡೆದಿವೆಯೇ ಎಂಬುದರ ಕುರಿತು ಪರಿಶೀಲಿಸಲಾಗುವುದು’ ಎಂದು ಅವರು ತಿಳಿಸಿದರು.
ಕೇರಳದ ದೇವಸ್ಥಾನವೊಂದರಲ್ಲಿ ಪ್ರಾಣಿ ಬಲಿ ನೀಡುವ 'ಶತ್ರು ಭೈರವಿ ಯಾಗ' ಕೈಗೊಳ್ಳಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಗುರುವಾರ ಆರೋಪಿಸಿದ್ದರು.
ಯಾರ ಹೆಸರನ್ನು ಬಹಿರಂಗಪಡಿಸದೇ ರಾಜ್ಯದ ಕೆಲವು ರಾಜಕೀಯ ವ್ಯಕ್ತಿಗಳು ಈ ಕೃತ್ಯ ನಡೆಸಿದ್ದರು ಎಂದಿದ್ದರು. ಅಘೋರಿಗಳ ಮೂಲಕ ಈ ಯಾಗ ನಡೆಸಲಾಗಿದೆ ಎಂದೂ ಆರೋಪಿಸಿದ್ದರು.
'ಕೇರಳದ ರಾಜರಾಜೇಶ್ವರಿ ದೇವಸ್ಥಾನದ ಬಳಿ ಶತ್ರು ಸಂಹಾರಕ್ಕಾಗಿ 'ಶತ್ರು ಭೈರವಿ ಯಾಗ' ನಡೀತಿದೆ. ಈ ಯಾಗಕ್ಕೆ 'ಪಂಚ ಬಲಿ' ನೀಡಲಾಗುತ್ತದೆ. 21 ಮೇಕೆ, ಮೂರು ಎಮ್ಮೆ, 21 ಕಪ್ಪು ಕುರಿ, ಐದು ಹಂದಿಗಳ ಬಲಿ ಕೊಡಲಾಗುತ್ತದೆ' ಎಂದು ಅವರು ಹೇಳಿದ್ದರು.