ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ–ಸೆಟ್‌ಗಾಗಿ ರೈಲಿನ ಟಾಯ್ಲೆಟ್‌ನಲ್ಲಿ ಕುಳಿತು ಪ್ರಯಾಣ!

ರಸ್ತೆ ಬದಿ, ರೈಲ್ವೆ ಫ್ಲಾಟ್‌ಫಾರ್ಮ್‌ನಲ್ಲಿ ಮಲಗಿದ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳು
Published 15 ಜನವರಿ 2024, 22:35 IST
Last Updated 15 ಜನವರಿ 2024, 22:35 IST
ಅಕ್ಷರ ಗಾತ್ರ

ಕಲಬುರಗಿ: ಸಹಾಯಕ ಪ್ರಾಧ್ಯಾಪಕರ ನೇಮಕಾತಿಯ ಅರ್ಹತಾ ಪರೀಕ್ಷೆ (ಕೆ–ಸೆಟ್‌) ಬರೆಯಲು ಬೆಂಗಳೂರಿಗೆ ತೆರಳಿದ್ದ ಕಲ್ಯಾಣ ಕರ್ನಾಟಕದ ನೂರಾರು ಅಭ್ಯರ್ಥಿಗಳು ರೈಲು, ಬಸ್‌ಗಳ ಸೀಟ್‌ ಸಿಗದೆ ಪರದಾಡಿದ್ದು, ಕೆಲವರು ರೈಲಿನ ಟಾಯ್ಲೆಟ್‌ನಲ್ಲಿ ಕುಳಿತು ಪ್ರಯಾಣಿಸಿ ಪರೀಕ್ಷೆ ಬರೆದರು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ನೇಮಕಾತಿ ಪರೀಕ್ಷೆಯಲ್ಲಿ ಬ್ಲೂಟೂತ್ ಸಾಧನ ಬಳಸಿದ ಅಕ್ರಮ ಪ್ರಕರಣ ಕೆ–ಸೆಟ್‌ ಮೇಲೂ ಪರಿಣಾಮ ಬೀರಿತ್ತು. ಹೀಗಾಗಿ, ಪಾರದರ್ಶಕ ಪರೀಕ್ಷೆಯ ದೃಷ್ಟಿಯಿಂದ ಕೆಇಎ ಅಧಿಕಾರಿಗಳು ಏಕಾಏಕಿ ಪರೀಕ್ಷಾ ಕೇಂದ್ರವನ್ನು ಕಲಬುರಗಿಯಿಂದ ಬೆಂಗಳೂರಿಗೆ ಸ್ಥಳಾಂತರಿಸಿದ್ದರು.

ಅಸಮಾಧಾನದ ನಡುವೆಯೂ ಪರೀಕ್ಷೆ ಬರೆಯಲು ಬೆಂಗಳೂರಿಗೆ ತೆರಳಿದ್ದ ಸಹಾಯಕ ಪ್ರಾಧ್ಯಾಪಕರ ಹುದ್ದೆಯ ಆಕಾಂಕ್ಷಿತ ಸ್ನಾತಕೋತ್ತರ ಪದವೀಧರರು ತಮ್ಮ ನರಕಯಾತನೆಯ ನೋವನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು.

‘ಪರೀಕ್ಷಾ ಕೇಂದ್ರವನ್ನು ಬೆಂಗಳೂರಿಗೆ ಸ್ಥಳಾಂತರವಾದ ಮರುದಿನದಿಂದ (ಡಿಸೆಂಬರ್ 14) ರೈಲಿನ ಕಾಯ್ದಿರಿಸಿದ ಸೀಟ್‌ಗೆ ಪ್ರಯತ್ನಿಸಿದರೂ ಸಿಗಲಿಲ್ಲ. ಅನಿವಾರ್ಯವಾಗಿ ಜನರಲ್ ಟಿಕೆಟ್‌ ಪಡೆದು ಬೆಂಗಳೂರಿನವರೆಗೂ ನಿಂತುಕೊಂಡೇ, ಕೆಲವರು ಸೀಟ್‌ಗಳ ಕೆಳಗಡಿ ಮಲಗಿ ಪ್ರಯಾಣಿಸಿದರು. ರೈಲಿನ ಟಾಯ್ಲೆಟ್‌ ರೂಮ್‌ನಲ್ಲಿ ಕುಳಿತು ಪ್ರಯಾಣಿಸಿದ್ದ ದೃಶ್ಯ ನೋಡಿದರೆ ನಾವು ಮನುಷ್ಯರೋ, ಕುರಿಗಳೋ ಎನಿಸಿತ್ತು. ಗಬ್ಬು ನಾರುತ್ತಿದ್ದ ಟಾಯ್ಲೆಟ್‌ನಲ್ಲಿ ಉಸಿರು ಬಿಗಿ ಹಿಡಿದುಕೊಂಡು ಪ್ರಯಾಣಿಸುವ ಸ್ಥಿತಿ ನಮ್ಮ ಶತ್ರುಗಳಿಗೂ ಬರಬಾರದಿತ್ತು’ ಎನ್ನುತ್ತಾರೆ ಕೆ–ಸೆಟ್‌ ಅಭ್ಯರ್ಥಿ, ಗುಲಬರ್ಗಾ ವಿ.ವಿ.ಯ ಅಣವೀರಗೌಡ ಬಿರಾದಾರ.

‘ಮಧ್ಯಾಹ್ನ 2ಕ್ಕೆ ಪರೀಕ್ಷೆ ಮುಗಿಸಿಕೊಂಡು ಬಸ್‌ ನಿಲ್ದಾಣಕ್ಕೆ ಬರುವ ವೇಳೆಗೆ 5 ಗಂಟೆಯಾಗಿದ್ದರಿಂದ ಕಲಬುರಗಿಯ ಬಹುತೇಕ ಬಸ್‌ಗಳು ಹೋಗಿದ್ದವು. ರೈಲು ನಿಲ್ದಾಣಕ್ಕೆ ಬಂದು ನೋಡಿದರೆ ಜನರಲ್ ಬೋಗಿಗಳು ಅದಾಗಲೇ ಭರ್ತಿಯಾಗಿದ್ದವು. ಅನಿವಾರ್ಯವಾಗಿ ರೈಲ್ವೆ ಫ್ಲಾಟ್‌ಫಾರ್ಮ್‌ನಲ್ಲಿ ಮಲಗಿ, ಮರುದಿನ ರೈಲು ಹತ್ತಿ ವಾಪಸ್ ಬಂದೆವು’ ಎಂದು ಮತ್ತೊಬ್ಬ ಅಭ್ಯರ್ಥಿ ಮಾಳಪ್ಪ ಹೇಳಿದರು.

‘ಕಷ್ಟು ಪಟ್ಟು ಓದಿ ಸ್ನಾತಕೋತ್ತರ ಪದವಿ ಮುಗಿಸಿದ್ದೇವೆ. ಕುಟುಂಬದವರು ಸಹ ನಮ್ಮ ಪರೀಕ್ಷೆಯನ್ನು ನಂಬಿಕೊಂಡು ಕುಳಿತ್ತಿದ್ದಾರೆ. ವರ್ಷಗಟ್ಟಲೇ ಮನೆಯಲ್ಲಿ ಕುಳಿತು ಓದಿದ್ದನ್ನು ನೆನಪಿನಲ್ಲಿ ಇರಿಸಿಕೊಂಡು ಬರೆಯಬೇಕಾದರೆ ಮಾನಸಿಕ ನೆಮ್ಮದಿ ಮುಖ್ಯವಾಗುತ್ತದೆ. ನೂರಾರು ಕಿ.ಮೀ. ದೂರದಿಂದ ಕಣ್ತುಂಬ ನಿದ್ರೆ ಇಲ್ಲದೆ, ಸರಿಯಾಗಿ ಊಟ ಇಲ್ಲದೆ ಪರೀಕ್ಷೆ ಬರೆಯುವುದು ಹೇಗಾಗುತ್ತದೆ? ಕೆಇಎ ಅಧಿಕಾರಿಗಳು ಪರೀಕ್ಷಾ ಕೇಂದ್ರವನ್ನು ಏಕಾಏಕಿ ಸ್ಥಳಾಂತರಿಸುವ ಮುನ್ನ ಅಭ್ಯರ್ಥಿಗಳ ಕಷ್ಟ–ನೋವಿಗೂ ಸ್ಪಂದಿಸಬೇಕಾಗಿತ್ತು’ ಎಂದು ಅಭ್ಯರ್ಥಿ ಅಂಬಿಕಾ ನುಡಿದರು.

‘ಬೆಂಗಳೂರು ಜಿಲ್ಲೆಯ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಕಲಬುರಗಿ ಕೇಂದ್ರದ ಅಭ್ಯರ್ಥಿಗಳಿಗೆ ಸಕಲ ರೀತಿಯ ವ್ಯವಸ್ಥೆ ಮಾಡುವುದಾಗಿ ಕೆಇಎ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಹೇಳಿಕೊಳ್ಳುವಂತಹ ಕನಿಷ್ಠ ಸೌಕರ್ಯಗಳು ಇರಲಿಲ್ಲ. ಬೆಂಗಳೂರಿನ ರೈಲು ನಿಲ್ದಾಣದಿಂದ 25–30 ಕಿ.ಮೀ. ದೂರದಲ್ಲಿ ಪರೀಕ್ಷಾ ಕೇಂದ್ರಗಳನ್ನು ಗುರುತಿಸಿದ್ದರು’ ಎಂದು ಅಭ್ಯರ್ಥಿ ನೇಹಾ ಬೇಸರದಿಂದ ಹೇಳಿದರು.

ಅಣವೀರಗೌಡ ಬಿರಾದಾರ
ಅಣವೀರಗೌಡ ಬಿರಾದಾರ
ಹಬ್ಬದ ಸೀಸನ್‌ನಲ್ಲಿ ಪರೀಕ್ಷೆಗಳು ನಡೆಸಿದ್ದರಿಂದ ಸಾವಿರಾರು ಅಭ್ಯರ್ಥಿಗಳು ಪ್ರಯಾಣದಲ್ಲಿ ಬಸವಳಿದರು. ಸರಿಯಾಗಿ ಪರೀಕ್ಷೆಯನ್ನು ಬರೆಯಲು ಆಗಲಿಲ್ಲ.
–ಅಣವೀರಗೌಡ ಬಿರಾದಾರ ಕೆ–ಸೆಟ್‌ ಅಭ್ಯರ್ಥಿ

‘ನೀರೂ ಕುಡಿಯಲಿಲ್ಲ’

‘ಬೆಂಗಳೂರಿಗೆ ಹೊಸಬರು ಆಗಿದ್ದರಿಂದ ಅಲ್ಲಿನ ಶೌಚಾಲಯಗಳು ಹೇಗಿರುತ್ತವೆಯೋ ಎಂಬ ಆತಂಕದಿಂದ ನೀರೂ ಕುಡಿಯದೇ ದಿನ ಕಳೆದೆವು’ ಎಂದು ಅಭ್ಯರ್ಥಿ ಭಾಗ್ಯ ‘ಪ್ರಜಾವಾಣಿ’ಗೆ ತಿಳಿಸಿದರು. ‘ಹಣಕಾಸಿನ ಸಮಸ್ಯೆಯಿಂದಾಗಿ ಪರೀಕ್ಷೆಯ ಹಿಂದಿನ ದಿನವೇ ಬೆಂಗಳೂರಿಗೆ ಬಂದಿದ್ದೆವು. ಹೀಗಾಗಿ ಬಸ್‌ ಫ್ರೀ ಇದ್ದರೂ ಸೀಟ್‌ಗಳು ಸಿಗಲಿಲ್ಲ. ನಿಂತು ಕೆಲವರು ಸೀಟ್‌ಗಳ ಕೆಳಗೆ ಮಲಗಿ ಪ್ರಯಾಣಿಸಿದರು. ಪರೀಕ್ಷೆ ಬರೆದು ಬಸ್ ನಿಲ್ದಾಣಕ್ಕೆ ಬರುವಷ್ಟರಲ್ಲಿ ಬಹುತೇಕ ಬಸ್‌ಗಳು ಹೊರಟು ಹೋಗಿದ್ದವು. ಅನಿವಾರ್ಯವಾಗಿ ಬಸ್ ನಿಲ್ದಾಣದಲ್ಲಿ ಕೆಲವರು ಮಲಗಿ ಮರುದಿನ ಸ್ವಗ್ರಾಮಕ್ಕೆ ಹೋದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT