ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್ಒಯು) ಮಾನ್ಯತೆ ರದ್ದಾಗಲು ಹಿಂದಿನ ಕುಲಪತಿ ಕಾರಣ ಎಂದು ರಾಜ್ಯಪಾಲ ವಜೂಭಾಯಿ ವಾಲಾ ಇಲ್ಲಿ ಶನಿವಾರ ಹೇಳಿದರು.
ಕೆಎಸ್ಒಯು ಘಟಿಕೋತ್ಸವ ಭವನ ಉದ್ಘಾಟಿಸಿ ಮಾತನಾಡಿ, ಮುಕ್ತ ವಿ.ವಿ ಮಾನ್ಯತೆ ಮುಂದುವರಿಸುವಂತೆ ಕೋರಿ ಹಿಂದಿನ ಕುಲಪತಿ ಯುಜಿಸಿಗೆ ಪತ್ರ ಬರೆಯಲಿಲ್ಲ. ಆ ಕಾರಣದಿಂದ ಮಾನ್ಯತೆ ಕಳೆದುಕೊಂಡಿತು ಎಂದು ತಿಳಿಸಿದರು.
2012ರಿಂದಲೂ ಮುಕ್ತ ವಿ.ವಿ ವಿದ್ಯಾರ್ಥಿಗಳು ಸಾಕಷ್ಟು ಕಷ್ಟ ಅನುಭವಿಸಿದ್ದಾರೆ. ಆದರೆ ಈಗಿನ ಕುಲಪತಿಯವರ ಪರಿಶ್ರಮದಿಂದ ಮತ್ತೆ ಮಾನ್ಯತೆ ದೊರೆತಿದೆ. ಪ್ರಯತ್ನಪಟ್ಟರೆ ಅದಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ಪ್ರಯತ್ನ ಪಡುವುದನ್ನು ನಿಲ್ಲಿಸಬಾರದು ಎಂದರು.
ಕೆಎಸ್ಒಯುಗೆ ಸಂಬಂಧಿಸಿದ ಶೇ 75ರಷ್ಟು ಸಮಸ್ಯೆಗಳು ಬಗೆಹರಿದಿದ್ದು, ಶೇ 25ರಷ್ಟು ಸಮಸ್ಯೆಗಳು ಬಗೆಹರಿಯಬೇಕಿವೆ. ಎಲ್ಲರೂ ಜತೆಯಾಗಿ ಪ್ರಯತ್ನಪಟ್ಟರೆ ಬಾಕಿಯಿರುವ ಸಮಸ್ಯೆಗಳಿಗೂ ಶೀಘ್ರದಲ್ಲೇ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು.