ಮೈಸೂರು: ವಿಧಾನ ಪರಿಷತ್ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿ ಗೆಲ್ಲಿಸಿಕೊಳ್ಳಲು ಕಾರ್ಯಕರ್ತರು, ಬೆಂಬಲಿಗರು ಹಾಗೂ ಮುಖಂಡರು ಕೊನೆ ಕ್ಷಣದ ಕಸರತ್ತುಗಳನ್ನು ನಡೆಸುತ್ತಿರುವುದು ಮತಗಟ್ಟೆಗಳ ಬಳಿ ಕಂಡುಬರುತ್ತಿದೆ.
ಜಿಲ್ಲೆಯ ಹುಣಸೂರು ಪಟ್ಟಣದ ತಾಲ್ಲೂಕು ಆಡಳಿತ ಸೌಧದ ಮತಗಟ್ಟೆಯಲ್ಲಿ ಮತದಾನ ನಡೆಯುತ್ತಿದೆ. ಕಾಂಪೌಂಡ್ ಹೊರಗೆ ಅಭ್ಯರ್ಥಿಗಳ ಕಡೆಯವರು ಪೆಂಡಾಲ್ ಹಾಕಿಕೊಂಡು ಮತದಾರರಿಗೆ ಚೀಟಿ ಬರೆದುಕೊಡುತ್ತಿದ್ದಾರೆ. ತಮ್ಮ ಅಭ್ಯರ್ಥಿಗೆ ಮತ ಹಾಕುವಂತೆ ಕೋರುತ್ತಿದ್ದಾರೆ.
ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್, ಬಿಜೆಪಿಯವರ ಪೆಂಡಾಲ್ಗಳ ಬಳಿ ಹೆಚ್ಚಿನ ಕಾರ್ಯಕರ್ತರು ಕಂಡುಬಂದರು. ಪಕ್ಷೇತರ ಅಭ್ಯರ್ಥಿ ಪ್ರಸನ್ನ ಎನ್. ಗೌಡ ಕಡೆಯವರು ಹಾಕಿದ್ದ ಪೆಂಡಾಲ್ ಬಳಿಯೂ ಜನರಿದ್ದರು.
ಗೇಟಿನ ಎರಡೂ ಬದಿಯಲ್ಲಿ ನಿಂತಿದ್ದ ಕಾರ್ಯಕರ್ತರು ತಮ್ಮ ಅಭ್ಯರ್ಥಿ ಬೆಂಬಲಿಸುವಂತೆ ಕೋರಿಕೊಳ್ಳುತ್ತಿದ್ದುದು, ಮತದಾರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದುದು ಕಂಡುಬಂತು.
ಈ ಮತಗಟ್ಟೆಯಲ್ಲಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಹಾಗೂ ಕಾಂಗ್ರೆಸ್ ಶಾಸಕ ಎಚ್.ಪಿ. ಮಂಜುನಾಥ್ ಮತದಾನ ಮಾಡಿದರು.