ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷರ ರಜತ ಸಂಭ್ರಮ: ಸಾರ್ವಜನಿಕರಿಗೆ ಅಡ್ಡಿ ಆರೋಪ

ಮಂಗಳೂರಿನಲ್ಲಿ ಪ್ರತ್ಯೇಕ ಪ್ರಕರಣ ದಾಖಲು
Last Updated 23 ಜನವರಿ 2019, 12:17 IST
ಅಕ್ಷರ ಗಾತ್ರ

ಮಂಗಳೂರು: ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಎನ್‌. ರಾಜೇಂದ್ರಕುಮಾರ್‌ ಅವರ ರಜತ ಸಂಭ್ರಮ ಹಾಗೂ ನವೋದಯ ಸ್ವಸಹಾಯ ಸಂಘಗಳ ವಿಂಶತಿ ಸಮಾರಂಭಕ್ಕಾಗಿ ನಗರದ ಹಲವೆಡೆ ಕಟೌಟ್‌ಗಳನ್ನು ಅಳವಡಿಸಿದ್ದ ಮತ್ತು ಸಾರ್ವಜನಿಕರಿಗೆ ಅಡ್ಡಿಪಡಿಸಿದ ಆರೋಪದಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ. ಮಂಗಳೂರು ದಕ್ಷಿಣ ಮತ್ತು ಪೂರ್ವ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ.

ಸಮಾರಂಭದ ಅಂಗವಾಗಿ ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆ ಜಂಕ್ಷನ್‌ಗಳು, ಜನರು ನಡೆದಾಡುವ ಸ್ಥಳಗಳು ಹಾಗೂ ರಸ್ತೆ ವಿಭಜಕಗಳಿಗೆ ಕಟೌಟ್‌ಗಳನ್ನು ಅಳವಡಿಸಿ, ಸಾರ್ವಜನಿಕರಿಗೆ ಹಾಗೂ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟು ಮಾಡಲಾಗಿದೆ ಎಂದು ದಕ್ಷಿಣ ಠಾಣೆಗೆ ನೀಡಲಾಗಿರುವ ದೂರಿನಲ್ಲಿ ತಿಳಿಸಲಾಗಿದೆ.

ಮಂಗಳೂರು ಮಹಾನಗರ ಪಾಲಿಕೆ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಹನುಮಂತ್ರಾಯ ತಿಳಿಸಿದ್ದಾರೆ.

ಮತ್ತೊಂದೆಡೆ, ಸಂಚಾರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರ (ಎಸಿಪಿ) ಎಂ.ಮಂಜುನಾಥ ಶೆಟ್ಟಿ ಅವರು ನೀಡಿದ ದೂರಿನ ಆಧಾರದಲ್ಲಿ ಮಂಗಳೂರು ಪೂರ್ವ ಠಾಣೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸರ್ಕಾರಿ ಅಧಿಕಾರಿಗಳ ಆದೇಶ ಉಲ್ಲಂಘನೆ (ಭಾರತೀಯ ದಂಡಸಂಹಿತೆಯ ಸೆಕ್ಷನ್ 188), ಅನಧಿಕೃತ ವಾಹನ ನಿಲುಗಡೆ (ಸೆಕ್ಷನ್ 283) ಮತ್ತು ಸಾರ್ವಜನಿಕರಿಗೆ ತೊಂದರೆ (ಸೆಕ್ಷನ್ 290) ವಿಷಯಕ್ಕೆ ಸಂಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ನಿಗದಿಪಡಿಸಿದ ಜಾಗಗಳಲ್ಲಿ ಬಸ್‌ಗಳನ್ನು ನಿಲುಗಡೆ ಮಾಡಲಾಗಿಲ್ಲ. ಬೃಹತ್ ಮೆರವಣಿಗೆ ನಡೆಸಿ ಕಚೇರಿಗೆ ತೆರಳುವವರಿಗೆ, ಶಾಲಾ ಮಕ್ಕಳಿಗೆ ಮತ್ತು ಸ್ಥಳೀಯರಿಗೆ ತೊಂದರೆ ಮಾಡಲಾಗಿದೆ.ಮಹಿಳೆಯರು ಮಕ್ಕಳಿಗೂ ತೊಂದರೆ ಮಾಡಲಾಗಿದೆ ಎಂದು ಎಸಿಪಿ ಅವರು ಸಂಘಟಕರ ವಿರುದ್ಧ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.

‘ಸಮಾರಂಭದಲ್ಲಿ ಭಾಗವಹಿಸಲು ಬರುವವರನ್ನು ನಗರದ ನೆಹರು ಮೈದಾನದ ಬಳಿ ಇಳಿಸಿ ನಂತರ ಬಸ್‌ಗಳನ್ನು ಕೊಟ್ಟಾರದ ಬಳಿ ಇರುವ ಗೋಲ್ಡನ್ ಫೀಂಚ್ ಮೈದಾನದಲ್ಲಿ ನಿಲುಗಡೆ ಮಾಡಬೇಕು. ಸಮಾರಂಭ ಮುಗಿದ ಬಳಿಕ ಜನರನ್ನು ಗೋಲ್ಡನ್ ಫೀಂಚ್ ಮೈದಾನದ ಬಳಿ ಕರೆದೊಯ್ಯಲು ಶಟಲ್ ಬಸ್‌ಗಳ ವ್ಯವಸ್ಥೆ ಮಾಡಬೇಕು ಎಂದು ಸಂಘಟಕರಿಗೆ ಸೂಚಿಸಲಾಗಿತ್ತು. ಆದರೆ, ಈ ವ್ಯವಸ್ಥೆಗಳನ್ನು ಮಾಡದೆ ನಗರದಾದ್ಯಂತ ಒಟ್ಟಾರೆಯಾಗಿ ಬಸ್‌ಗಳನ್ನು ನಿಲ್ಲಿಸಲಾಗಿದ್ದು, ಸಂಚಾರ ದಟ್ಟಣೆಗೆ ಕಾರಣವಾಗಿತ್ತು’ ಎಂದು ಪೊಲೀಸರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT