ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯು ಇಲಾಖೆ ಉಸ್ತುವಾರಿ ಬದಲಾವಣೆಗೆ ಸುತ್ತೋಲೆ; ರದ್ದತಿಗೆ ಬಿಜೆಪಿ ಆಗ್ರಹ

Published 10 ನವೆಂಬರ್ 2023, 15:49 IST
Last Updated 10 ನವೆಂಬರ್ 2023, 15:49 IST
ಅಕ್ಷರ ಗಾತ್ರ

ಬೆಂಗಳೂರು: ಪದವಿಪೂರ್ವ ಶಿಕ್ಷಣ ಇಲಾಖೆಯ ಕಾರ್ಯ ನಿರ್ವಹಣೆಯನ್ನು ಆಯಾ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ (ಸಿಇಒ) ಹಾಗೂ ಆಯಾ ವಿಭಾಗದ ಸಂಬಂಧಪಟ್ಟ ಶಾಲಾ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತರಿಗೆ ಮೇಲುಸ್ತುವಾರಿ ಜವಾಬ್ದಾರಿ ನೀಡಲಾಗಿದ್ದು, ಈ ಕುರಿತ ಸುತ್ತೋಲೆ ರದ್ದು ಮಾಡುವಂತೆ ಬಿಜೆಪಿ ಒತ್ತಾಯಿಸಿದೆ.

ವಿಧಾನಪರಿಷತ್‌ನ ಬಿಜೆಪಿ ಸದಸ್ಯ ಎಸ್.ವಿ.ಸಂಕನೂರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರದ ಈ ಕ್ರಮದಿಂದ ಪದವಿಪೂರ್ವ ಶಿಕ್ಷಣ ಇಲಾಖೆ ವ್ಯವಸ್ಥೆ ಅಸ್ತವ್ಯಸ್ತ ಆಗಲಿದೆ ಎಂದರು.

ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಹಲವಾರು ತಪ್ಪು ನಿರ್ಣಯಗಳನ್ನು ಕೈಗೊಂಡಿದ್ದು ಇದರಿಂದ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪಾಲಕರ ಸಮುದಾಯದಲ್ಲಿ ಗೊಂದಲ ನಿರ್ಮಾಣಗೊಂಡಿದೆ ಎಂದರು ಅವರು ಹೇಳಿದರು.

‘ಪದವಿ ಪೂರ್ವ ಹಂತದಲ್ಲಿ ಗುಣಮಟ್ಟದ ಶಿಕ್ಷಣ ಇರಬೇಕು ಎಂಬ ಕಾರಣಕ್ಕೆ ಬಂಗಾರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಇದಕ್ಕಾಗಿ ಪ್ರತ್ಯೇಕ ಇಲಾಖೆಯನ್ನೇ ಸ್ಥಾಪಿಸಲಾಯಿತು. ಆಗ ವೀರಪ್ಪಮೊಯ್ಲಿ  ಶಿಕ್ಷಣ ಸಚಿವರಾಗಿದ್ದರು.  ಪ್ರತ್ಯೇಕ ಇಲಾಖೆ ಸ್ಥಾಪನೆಗಾಗಿ ಹಲವು ಹೋರಾಟಗಳನ್ನು ನಡೆಸಿದ್ದೆವು. ಬಂಗಾರಪ್ಪ ಕಾಲದಲ್ಲಿ ಆಗಿದ್ದ ಉತ್ತಮ ವ್ಯವಸ್ಥೆಯನ್ನು ಅವರ ಪುತ್ರ ಮಧು ಬಂಗಾರಪ್ಪ ಒಂದು ಸುತ್ತೋಲೆ ಮೂಲಕ ಬದಲು ಮಾಡಿರುವುದು ಬೇಸರ ಸಂಗತಿ’ ಎಂದು ಸಂಕನೂರು ತಿಳಿಸಿದರು.

ಮಧು ಬಂಗಾರಪ್ಪ ಅವರು ವಾರ್ಷಿಕ ಪರೀಕ್ಷೆ ಬಳಿಕ ಎರಡು ಪೂರಕ ಪರೀಕ್ಷೆಗಳನ್ನು ನಡೆಸಲು  ಸೂಚಿಸಿದ್ದಾರೆ. ಹಿಂದೆ ಒಂದು ಪೂರಕ ಪರೀಕ್ಷೆ ನಡೆಯುತ್ತಿತ್ತು. ಮೂರು ಪರೀಕ್ಷೆಗಳು ಮುಗಿಯಲು ನವೆಂಬರ್ 10 ರವರೆಗೆ ಅವಕಾಶ ಬೇಕು. ಇದರಿಂದ ಬೋಧನಾ ಅವಧಿಯೇ ಸಿಗುವುದಿಲ್ಲ. ಇದರಿಂದ ಶೇ 90 ವಿದ್ಯಾರ್ಥಿಗಳಿಗೆ ಅನ್ಯಾಯ ಆಗಲಿದೆ ಎಂದು ಅವರು ಆಕ್ಷೇಪಿಸಿದರು. 

ಇಲಾಖೆಯಲ್ಲಿ ಯಾವುದೇ ಬದಲಾವಣೆ ಮಾಡಬೇಕಿದ್ದರೂ ಕಾಯ್ದೆಗೆ ತಿದ್ದುಪಡಿ ತರಬೇಕು. ಅವೆಲ್ಲವನ್ನು ಗಾಳಿಗೆ ತೂರಿ ಸುತ್ತೋಲೆ ಮೂಲಕ ಬದಲಾವಣೆ ಮಾಡಲಾಗಿದೆ. ಸಚಿವರಿಗೆ ಹೊರಗಿನವರು ಸಲಹೆಗಳನ್ನು ನೀಡಿ ಈ ರೀತಿಯ ಬದಲಾವಣೆಗಳನ್ನು ಮಾಡಿಸುತ್ತಿದ್ದಾರೆ ಎಂದು ವಿಧಾನಪರಿಷತ್‌ನ ಮಾಜಿ ಸದಸ್ಯ ಅರುಣ್ ಶಹಾಪುರ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT