ಯಡಿಯೂರಪ್ಪ ಜೊತೆ ಕೆಲಹೊತ್ತು ಚರ್ಚಿಸಿದ ಬಳಿಕ, ಬೊಮ್ಮಾಯಿ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮತ್ತು ಕೇಂದ್ರದಿಂದ ಬಂದಿದ್ದ ವೀಕ್ಷಕರಾದ ಧರ್ಮೇಂದ್ರ ಪ್ರಧಾನ್ ಮತ್ತು ಕಿಷನ್ ರೆಡ್ಡಿ ಅವರನ್ನು ಭೇಟಿ ಮಾಡಲು ಕುಮಾರಕೃಪಾ ಅತಿಥಿಗೃಹಕ್ಕೆ ಹೋದರು. ಅಲ್ಲಿಯೂ ಸಚಿವಾಕಾಂಕ್ಷಿ ಮಾಜಿ ಸಚಿವರೂ, ಶಾಸಕರ ದಂಡು ಇತ್ತು. ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್, ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ತಿಪ್ಪಾರೆಡ್ಡಿ, ಎಂ.ಪಿ. ರೇಣುಕಾಚಾರ್ಯ, ಮುರುಗೇಶ್ ನಿರಾಣಿ, ಎಸ್.ಟಿ, ಸೋಮಶೇಖರ್, ಡಾ.ಕೆ. ಸುಧಾಕರ್ ಹೀಗೆ ಒಬ್ಬೊಬ್ಬರೇ ಬಂದರು. ಆ ಮೂಲಕ, ಅತಿಥಿಗೃಹ ಕೆಲಹೊತ್ತು ರಾಜಕೀಯ ಚಟುವಟಿಕೆಯ ಕೇಂದ್ರವಾಗಿ ಬದಲಾಯಿತು. ಸಂಸದರಾದ ಜಿ.ಎಂ ಸಿದ್ದೇಶ್ವರ, ತೇಜಸ್ವಿ ಸೂರ್ಯ, ಶಿವಕುಮಾರ ಉದಾಸಿ, ಮುನಿಸ್ವಾಮಿ ಕೂಡಾ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿದರು.