ಬಳ್ಳಾರಿ: ' ಸಚಿವನಾಗುವ ಆಸೆಯನ್ನು ಸದ್ಯಕ್ಕೆ ಬಿಟ್ಟಿರುವೆ' ಎಂದು ಗ್ರಾಮೀಣ ಶಾಸಕ ಬಿ.ನಾಗೇಂದ್ರ ಹೇಳಿದರು.
ಮೂರು ತಿಂಗಳ ಬಳಿಕ ನಗರಕ್ಕೆ ಮಂಗಳವಾರ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ' ಬಿಜೆಪಿ ತೊರೆದು ಕಾಂಗ್ರೆಸ್ ಗೆ ಸೇರುವ ಸಂದರ್ಭದಲ್ಲಿ ಸೂಕ್ತ ಸ್ಥಾನಮಾನ ಕೊಡೋದಾಗಿ ನಾಯಕರು ಹೇಳಿದ್ದರು. ಇನ್ನೂ ಕಾಯುತ್ತೇನೆ ಎಂದರು.
'ನಾನು ಕಾಂಗ್ರೆಸ್ಗೆಸೇರ್ಪಡೆ ಆದ ಸಂದರ್ಭದಲ್ಲಿ ವಿಜಯನಗರದ ಆನಂದ್ ಸಿಂಗ್ ಕೂಡ ಸೇರಿದರು. ಸದ್ಯ ಸಚಿವ ಸ್ಥಾನದ ವಿಚಾರವನ್ನು ತಲೆಯಿಂದ ತೆಗೆದು ಹಾಕಿದ್ದೇನೆ' ಎಂದರು.
' ಪಕ್ಷ ತೀರ್ಮಾನ ಮಾಡಿ ಇಬ್ಬರಿಗೆ ಸಚಿವ ಸ್ಥಾನ ನೀಡಿದೆ. ನಿಗಮ ಮಂಡಳಿ ಸ್ಥಾನಕ್ಕಿಂತ ಸಚಿವ ಸ್ಥಾನದ ಆಕಾಂಕ್ಷಿ ಆಗಿದ್ದೆ. ಈಗ ನಾನು ಸಚಿವಾಕಾಂಕ್ಷಿ ಅಲ್ಲ' ಎಂದು ಸ್ಪಷ್ಟಪಡಿಸಿದರು.
'ಮೂರು ತಿಂಗಳಿನಿಂದ ಕ್ಷೇತ್ರದ ಜನರ ಆಶೋತ್ತರಗಳಿಗೆ ಸ್ಪಂದಿಸಲು ಆಗಲಿಲ್ಲ. ಮೂರು ತಿಂಗಳಲ್ಲಿ ಆಗದಿರುವ ಕೆಲಸವನ್ನ ಒಂದು ತಿಂಗಳಲ್ಲಿ ಮಾಡಿ ಮುಗಿಸುತ್ತೇನೆ.ನನ್ನ ಕ್ಷೇತ್ರ ಸುವರ್ಣ ಕ್ಷೇತ್ರ ಆಗಲಿದೆ ' ಎಂದು ವಿಶ್ವಾಸ ವ್ಯಕ್ತಪಡಿಸಿದರು.
'ಶಾಸಕ ಗಣೇಶ್ ಮತ್ತು ಆನಂದಸಿಂಗ್ ನಡುವಿನ ಗಲಾಟೆ ಆತಂಕಕಾರಿ. ಗಣೇಶ್ ನನ್ನ ತಮ್ಮನಂತೆ. ಅವರು ಹಲ್ಲೆ ನಡೆಸುವವರಲ್ಲ. ಆನಂದ್ ಸಿಂಗ್ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದೆ . ಆಗ ಅವರು ನಡೆದಿದ್ದನ್ನೆಲ್ಲ ಹೇಳಿದರು. ಗಣೇಶ ಅವರನ್ನು ಕೈ ಬಿಡೋಲ್ಲ. ಇಬ್ಬರನ್ನೂ ಕೂಡಿಸಿ ರಾಜೀ ಸಂಧಾನ ಮಾಡುತ್ತೇವೆ ' ಎಂದರು.
'ನಮ್ಮ ಜಿಲ್ಲೆಯ ಸಮಸ್ಯೆ ನಮ್ಮಲ್ಲಿಯೇ ಬಗೆಹರಿಯಬೇಕು' ಎಂದರು.