ಮೈಸೂರು: ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಇದೇ 21ರಂದುಮೈಸೂರಿಗೆ ಆಗಮಿಸಲಿದ್ದಾರೆ. ಅದು ಅವರು ಯೋಗ ಮಾಡುವ ವೇದಿಕೆಯೇ ಹೊರತು ರಾಜಕೀಯದ್ದಲ್ಲ. ಅವರ ಜೊತೆ ನಾನು ಹಾಗೂ ಸ್ಥಳೀಯ ಯಾವ ಶಾಸಕರಿಗೂ ವೇದಿಕೆಯಲ್ಲಿ ಸ್ಥಾನ ಇರುವುದಿಲ್ಲ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.
ಇಲ್ಲಿ ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದ ಅವರು, ಮೋದಿ ಅವರ ಜೊತೆ ಮುಖ್ಯಮಂತ್ರಿ, ರಾಜ್ಯಪಾಲರು, ಕೇಂದ್ರ ಆಯುಷ್ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾತ್ರ ಅವಕಾಶ. ನಾವೆಲ್ಲಾ ರಾಜಕಾರಣಿಗಳು ವೇದಿಕೆಯ ಕೆಳ ಭಾಗದ ಒಂದು ಬದಿಯಲ್ಲಿರುತ್ತೇವೆ. ಇದರಲ್ಲಿ ಯಾವ ಬದಲಾವಣೆಗಳೂ ಇಲ್ಲ ಎಂದರು.
ಯೋಗ ದಿನದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನನ್ನ ಮತ್ತು ರಾಮದಾಸ್ ನಡುವೆ ಕ್ರೆಡಿಟ್ ವಾರ್ ನಡೆಯುತ್ತಿಲ್ಲ ಎಂದರು.
ಮೋದಿ ಅವರ ವೇದಿಕೆ ಮುಂಭಾಗ 7 ಸಾವಿರ ಜನಕ್ಕೆ ಅವಕಾಶ ಇರುತ್ತದೆ. ಒಟ್ಟಾರೆ ಅರಮನೆಯ ಎಲ್ಲಾ ಭಾಗವೂ ಸೇರಿ 15 ಸಾವಿರ ಜನಕ್ಕೆ ಅವಕಾಶವಾಗಬಹುದು. ಆದರೆ, ಎಲ್ಲರಿಗೂ ಮೋದಿ ಅವರು ಕಾಣುವುದಿಲ್ಲ. ಈಗಾಗಲೇ ನೋಂದಣಿ ಆರಂಭವಾಗಿದೆ. ನೋಂದಣಿ ಮಾಡಿಕೊಂಡವರಿಗೆ ಮಾತ್ರ ಮೋದಿ ಅವರೊಂದಿಗೆ ಯೋಗ ಮಾಡಲು ಅವಕಾಶವಿರಲಿದೆ ಎಂದರು.
ಮೋದಿ ಅವರಿಗೆ ಸ್ವಾಗತ ಕೋರುವ ಫ್ಲೆಕ್ಸ್ಗಳನ್ನು ಯಾರೂ ಹಾಕಬಾರದು.ಸರ್ಕಾರವೇ ಮೋದಿ ಅವರ ಸ್ವಾಗತದ ಬ್ಯಾನರ್ಗಳನ್ನು ಹಾಕುತ್ತದೆ. ನಮ್ಮ ಪಕ್ಷದವರೇ ಇರಲಿ, ಸಂಘ- ಸಂಸ್ಥೆಗಳವರೇ ಇರಲಿ ಯಾವುದೇ ಫ್ಲೆಕ್ಸ್ಗಳನ್ನ ಹಾಕಿ ನಗರದ ಸೌಂದರ್ಯ ಹಾಳು ಮಾಡಬಾರದು ಎಂದು ಕೋರಿದರು.