ತುಮಕೂರು: ಕೊಬ್ಬರಿ ಬೆಲೆ ತೀವ್ರವಾಗಿ ಕುಸಿದಿದ್ದು, ಬೆಂಬಲ ಬೆಲೆ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗೃಹ ಸಚಿವ ಡಾ.ಜಿ. ಪರಮೇಶ್ವರ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ತೆಂಗು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ₹18 ಸಾವಿರವಿದ್ದ ಕ್ವಿಂಟಲ್ ಕೊಬ್ಬರಿ ಈಗ ₹9 ಸಾವಿರಕ್ಕೆ ಇಳಿದಿದೆ. ಯಾವ ರೀತಿಯಲ್ಲಿ ಬೆಂಬಲ ಬೆಲೆ ಕೊಟ್ಟು, ಸಮಸ್ಯೆ ಪರಿಹರಿಸಬೇಕು ಎಂಬ ಬಗ್ಗೆ ಚರ್ಚಿಸಲಾಗುವುದು’ ಎಂದರು.
ಸುಳ್ಳು ಸುದ್ದಿ: ‘ಕಚೇರಿಗಳಿಗೆ ಬರುವಾಗ ಕುಂಕುಮ, ವಿಭೂತಿ ಇಟ್ಟುಕೊಂಡು ಬರಬಾರದು ಎಂದು ನಾನು ಎಲ್ಲೂ ಹೇಳಿಲ್ಲ. ಈ ರೀತಿ ಬರೆಯುವುದು ಪ್ರಚೋದನೆಯಾಗುತ್ತದೆ. ನನಗೆ ಪ್ರಜ್ಞೆ ಇದೆ. ಜವಾಬ್ದಾರಿಯುತ ಸಚಿವನಾಗಿ ಈ ರೀತಿ ಹೇಳಲು ಸಾಧ್ಯವಿಲ್ಲ. ಸರ್ಕಾರದ ನಿಯಮದಂತೆ ಎಲ್ಲರೂ ನಡೆದುಕೊಳ್ಳಬೇಕಾಗುತ್ತದೆ. ನಾನು ಗೃಹ ಸಚಿವನಾಗಿದ್ದಾಗ ಒಂದು ಕಾನೂನು, ಬೇರೆಯವರು ಸಚಿವರಾದಾಗ ಮತ್ತೊಂದು ಕಾನೂನು ಮಾಡಲು ಬರುವುದಿಲ್ಲ. ಯಾರು ಸುಳ್ಳು ಸುದ್ದಿ ಬರೆದಿದ್ದಾರೆ ಎಂಬುದನ್ನು ಪತ್ತೆಮಾಡುವ ಕೆಲಸ ನಡೆದಿದೆ’ ಎಂದು ತಿಳಿಸಿದರು.
ಕೇರಳಕ್ಕೆ ಮುಂಗಾರು ಪ್ರವೇಶ ಮಾಡಿದ್ದು, ಕರಾವಳಿ ಭಾಗಕ್ಕೂ ಮಳೆ ಬರಲಿದೆ. ಆದಷ್ಟು ಬೇಗ ಒಳನಾಡಿನ ಜಿಲ್ಲೆಗಳಲ್ಲೂ ಮಳೆಯಾಗಬಹುದು. ಈಗಾಗಲೇ ಜಿಲ್ಲೆಯಲ್ಲಿ ಮಳೆ ಕೊರತೆಯಾಗಿದ್ದು, ಇನ್ನೊಂದು ವಾರದಲ್ಲಿ ಮಳೆ ಬಾರದಿದ್ದರೆ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಲಿದೆ ಎಂದು ಹೇಳಿದರು.
ಬಿತ್ತನೆ ಬೀಜ, ಗೊಬ್ಬರದ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು. ಈಗಾಗಲೇ ರಾಜ್ಯಮಟ್ಟದಲ್ಲಿ ಮುಖ್ಯಮಂತ್ರಿ, ಸಚಿವರು ಪರಿಶೀಲನೆ ನಡೆಸಿ ಕೆಲವು ನಿರ್ದೇಶನ ನೀಡಿದ್ದಾರೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.